ಡಿಯೋರಿಯಾ: ತನ್ನ ಸಹೋದರನ ಮೇಲೆ ಹಲ್ಲೆ ನಡೆಸುತ್ತಿದ್ದ ಗುಂಪಿನಿಂದ ರಕ್ಷಿಸಲು ಮುಂದಾದ ಮಹಿಳೆಯನ್ನು ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಡಿಯೋರಿಯಾ ಜಿಲ್ಲೆಯ ಕುರ್ಮೌಟಾ ಠಾಕೂರ್ ಗ್ರಾಮದಲ್ಲಿ ಘಟನೆ ನಡೆದಿದ್ದು ಹಳೇ ದ್ವೇಷದ ಹಿನ್ನಲೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ.
ಹಳೇ ವೈಷಮ್ಯ
ಶೈಲೇಶ್ ಸಾಹ್ನಿ ಕುಟುಂಬಸ್ಥರೊಂದಿಗೆ ಹಳೇ ವೈಷಮ್ಯ ಹೊಂದಿದ್ದ ಗುಂಪೊಂದು ಶುಕ್ರವಾರ ಸಂಜೆ ಯುವಕನ ಮೇಲೆ ಹಲ್ಲೆ ನಡೆಸಿತ್ತು. ಇದನ್ನು ತಿಳಿದು ಸ್ಥಳಕ್ಕೆ ತೆರಳಿದ ಮಹಿಳೆ ಅಲ್ಕಾ ಸಾಹ್ನಿ(25) ತನ್ನ ಸಹೋದರನ ರಕ್ಷಣೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬಿ.ವಿ. ಶ್ರೀನಿವಾಸ್ ವಿರುದ್ಧ ಕಿರುಕುಳದ ಆರೋಪ; ಕಾಂಗ್ರೆಸ್ನಿಂದ ಮಹಿಳೆ ಉಚ್ಛಾಟನೆ
ಈ ವೇಳೆ ಗುಂಪಿನಲ್ಲಿದ್ದ ಜಿತೇಂದ್ರ ಸಿಂಗ್ ಹಾಗೂ ರಾಜು ಸಿಂಗ್ ಎಂಬುವವರು ಮಹಿಳೆ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಭೂ ವ್ಯಾಜ್ಯ
ಭೂ ವ್ಯಾಜ್ಯ ಸಂಬಂಧ ಸಾಹ್ನಿ ಕುಟುಂಬ ಹಾಗೂ ಜಿತೇಂದ್ರ ಸಿಂಗ್ ನಡುವೆ ವೈಷಮ್ಯವಿತ್ತು. ಇದೇ ವಿಚಾರಕ್ಕೆ ಸಾಹ್ನಿ ಕುಟುಂಬರ್ಸತರು ಗ್ರಾಮವನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿದ್ದರು.
ಶುಕ್ರವಾರ ಕಾರ್ಯನಿಮಿತ್ತ ಕುರ್ಮೌಟಾ ಠಾಕೂರ್ ಗ್ರಾಮಕ್ಕರೆ ಭೇಟಿ ನೀಡಿದ್ದ ಶೈಲೇಶ್ ಸಾಹ್ನಿ ಮೇಲೆ ಜಿತೇಂದ್ರ ಸಿಂಗ್ ಹಾಗೂ ರಾಜು ಸಿಂಗ್ ಹಲ್ಲೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ ತಿಳಿಸಿದ್ದಾರೆ.