ರಾಯಚೂರು:ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಕ್ಕಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಸಾಹಿತಿ ರಾಮಣ್ಣ ಹವಳೆ ಹೇಳಿದರು.
ಕನ್ನಡದ ಮೇಲಿನ ಅಭಿಮಾನ ಸಾಹಿತ್ಯ ಪರಿಷತ್ತು ಸ್ಥಾಪನೆ
ಸ್ಥಳೀಯ ಕನ್ನಡ ಭವನದಲ್ಲಿ ಕಸಾಪ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಸಂಜೆ ಮಾತನಾಡಿದರು. ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾದ ಮಿರ್ಜಾ ಇಸ್ಮಾಯಿಲ್, ಎಂ.ವಿಶ್ವೇಶ್ವರಯ್ಯ ಅವರ ಆಸಕ್ತಿ ಹಾಗೂ ಕನ್ನಡದ ಮೇಲಿನ ಅಭಿಮಾನದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೊಂಡಿದೆ ಎಂದರು.
ಇದನ್ನೂ ಓದಿ: ಕನ್ನಡ ಅನ್ನದ ಭಾಷೆಯಾಗಿ ಉಳಿಯಬೇಕು : ಲೇಖಕ ಎಚ್.ಎ.ಪುರುಷೋತ್ತಮ್ರಾವ್ ಅಭಿಮತ, ಜಿಲ್ಲಾದ್ಯಂತ ಕಸಾಪ ಸಂಸ್ಥಾಪನಾ ದಿನಾಚರಣೆ
ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಮಹತ್ವದ ಸ್ಥಾನವಿದೆ. ಕನ್ನಡದ ಸಾಹಿತಿಗಳು ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ, ಆರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕಸಾಪ ಸಾಹಿತ್ಯ ಮತ್ತು ಕನ್ನಡದ ಮನಸುಗಳನ್ನು ಒಗ್ಗೂಡಿಸುವ ಮತ್ತು ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಕನ್ನಡದ ಮನಸುಗಳಿಂದ ಹೆಚ್ಚಿನ ಪ್ರೋತ್ಸಾಹ
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ, ಪರಿಷತ್ತು ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ತನ್ನ ಕಾಳಜಿಯನ್ನು ತೋರುತ್ತಾ ಬಂದಿದ್ದು, ಅದಕ್ಕೆ ಕನ್ನಡದ ಮನಸುಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬರುತ್ತಿವೆ ಎಂದರು.
ಸಾಹಿತಿಗಳಾದ ಬಾಬು ಭಂಡಾರಿಗಲ್, ಮಧುಕುಮಾರಿ ಪಾಂಡೆ, ಸಿದ್ದಲಿಂಗಯ್ಯ ಗಚ್ಚಿನ ಹಿರೇಮಠ, ಅಬ್ದುಲ್ ಕರೀಂಸಾಬ್, ಬೀರಪ್ಪ ಶಂಭೋಜಿ, ಪಾರ್ವತಿ ಪಾಟೀಲ್, ಯಮನೂರಪ್ಪ ಸಾಬ್ ನದಾಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಶರಣಪ್ಪ ಗೋನಾಳ್ ಹಾಗೂ ಪ್ರತಿಭಾ ಗೋನಾಳರಿಂದ ಗಾಯನ ಕಾರ್ಯಕ್ರಮ ನಡೆಯಿತು. ಕಸಾಪ ಪದಾಧಿಕಾರಿಗಳಾದ ದಂಡಪ್ಪ ಬಿರಾದರ, ನಾಗಪ್ಪ ಹೊರಪ್ಯಾಟಿ, ರೇಖಾ ಪಾಟೀಲ್, ಮಲ್ಲಿಕಾರ್ಜುನ ದೋತರಬಂಡಿ ಇದ್ದರು.