ಕೋಲಾರ: ಕನ್ನಡಿಗರು ಅಭಿಮಾನ ಶೂನ್ಯರಾಗಿರುವುದರಿಂದ ಕನ್ನಡ ಅನ್ನದ ಭಾಷೆಯಾಗುತ್ತಿಲ್ಲ. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪರಿಸರ ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮ್ರಾವ್ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಧ್ವಜ ಸ್ತಂಭಗಳನ್ನು ನೆಟ್ಟರೆ ಸಾಲದು, ಕನ್ನಡವನ್ನು ಪ್ರತಿಯೊಬ್ಬರಿಗೂ ಕಲಿಸುವಂತಾಗಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸುವಂತಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಕನ್ನಡದ ಪರವಾಗಿ ದೊಡ್ಡ ಧ್ವನಿಯಾಗಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯಶಿಕ್ಷಕ ನಾರಾಯಣಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಭಾಷೆ ನೆಲ ಜಲದ ವಿಚಾರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಅನೇಕ ಕವಿ, ಲೇಖಕ, ಸಾಹಿತಿಗಳನ್ನು ಪೋಷಿಸಿ ಪುರಸ್ಕರಿಸಿದೆ. ಕನ್ನಡ ಸದಾಕಾಲ ಮನೆ ಮನಗಳ ಮಾತಾಗಿ ಉಳಿಯಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ, 107 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ರಾಗಿದ್ದ ಸರ್ಎಂ.ವಿಶ್ವೇಶ್ವರಯ್ಯರ ದೂರದೃಷ್ಠಿ ಕೂಸಾಗಿ ಕಸಾಪ ಜನ್ಮ ತಾಳಿ ಇದೀಗ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಿಂದ ಹೋಬಳಿ ಮಟ್ಟದವರೆಗೂ ವಿಸ್ತಾರಗೊಂಡಿದೆ. ಕಸಾಪದಲ್ಲಿ ಮಹನೀಯರ 2 ಸಾವಿರಕ್ಕೂ ಹೆಚ್ಚು ದತ್ತಿ ಕಾರ್ಯಕ್ರಮಗಳಿದ್ದು, ಜಿಲ್ಲೆಯಲ್ಲಿಯೂ 18 ದತ್ತಿಗಳಿವೆ. ದತ್ತಿ ಕಾರ್ಯಕ್ರಮಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸುವ ಜವಾಬ್ದಾರಿ ಇದೆ ಎಂದರು.
ಉಪನ್ಯಾಸಕಿ ಕೆ.ಎನ್.ವಿಮಲಾ ಅವರನ್ನು ಸನ್ಮಾನಿಸಲಾಯಿತು. ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್, ವೇಣುಗೋಪಾಲ್, ಜಿಲ್ಲಾ ಕೋಶಾಧ್ಯಕ್ಷ ವಿನಯ್ ಗಂಗಾಪುರ, ಮುರಳಿ ಮೋಹನ್ ಇದ್ದರು.