More

    ಕನ್ನಡ ಅನ್ನದ ಭಾಷೆಯಾಗಿ ಉಳಿಯಬೇಕು : ಲೇಖಕ ಎಚ್​.ಎ.ಪುರುಷೋತ್ತಮ್​ರಾವ್​ ಅಭಿಮತ, ಜಿಲ್ಲಾದ್ಯಂತ ಕಸಾಪ ಸಂಸ್ಥಾಪನಾ ದಿನಾಚರಣೆ

    ಕೋಲಾರ: ಕನ್ನಡಿಗರು ಅಭಿಮಾನ ಶೂನ್ಯರಾಗಿರುವುದರಿಂದ ಕನ್ನಡ ಅನ್ನದ ಭಾಷೆಯಾಗುತ್ತಿಲ್ಲ. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪರಿಸರ ವಿಜ್ಞಾನ ಲೇಖಕ ಎಚ್​.ಎ.ಪುರುಷೋತ್ತಮ್​ರಾವ್​ ತಿಳಿಸಿದರು.
    ನಗರದ ಕನ್ನಡ ಸಾಹಿತ್ಯ ಪರಿಷತ್​ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಧ್ವಜ ಸ್ತಂಭಗಳನ್ನು ನೆಟ್ಟರೆ ಸಾಲದು, ಕನ್ನಡವನ್ನು ಪ್ರತಿಯೊಬ್ಬರಿಗೂ ಕಲಿಸುವಂತಾಗಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸುವಂತಾಗಬೇಕು ಎಂದರು.
    ಕನ್ನಡ ಸಾಹಿತ್ಯ ಪರಿಷತ್​ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಕನ್ನಡದ ಪರವಾಗಿ ದೊಡ್ಡ ಧ್ವನಿಯಾಗಬೇಕು ಎಂದು ಸಲಹೆ ನೀಡಿದರು.
    ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯಶಿಕ್ಷಕ ನಾರಾಯಣಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್​ ಭಾಷೆ ನೆಲ ಜಲದ ವಿಚಾರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಅನೇಕ ಕವಿ, ಲೇಖಕ, ಸಾಹಿತಿಗಳನ್ನು ಪೋಷಿಸಿ ಪುರಸ್ಕರಿಸಿದೆ. ಕನ್ನಡ ಸದಾಕಾಲ ಮನೆ ಮನಗಳ ಮಾತಾಗಿ ಉಳಿಯಬೇಕಾಗಿದೆ ಎಂದರು.
    ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಎನ್​.ಬಿ.ಗೋಪಾಲಗೌಡ ಮಾತನಾಡಿ, 107 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್​ ಮತ್ತು ದಿವಾನ್​ರಾಗಿದ್ದ ಸರ್​ಎಂ.ವಿಶ್ವೇಶ್ವರಯ್ಯರ ದೂರದೃಷ್ಠಿ ಕೂಸಾಗಿ ಕಸಾಪ ಜನ್ಮ ತಾಳಿ ಇದೀಗ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಿಂದ ಹೋಬಳಿ ಮಟ್ಟದವರೆಗೂ ವಿಸ್ತಾರಗೊಂಡಿದೆ. ಕಸಾಪದಲ್ಲಿ ಮಹನೀಯರ 2 ಸಾವಿರಕ್ಕೂ ಹೆಚ್ಚು ದತ್ತಿ ಕಾರ್ಯಕ್ರಮಗಳಿದ್ದು, ಜಿಲ್ಲೆಯಲ್ಲಿಯೂ 18 ದತ್ತಿಗಳಿವೆ. ದತ್ತಿ ಕಾರ್ಯಕ್ರಮಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸುವ ಜವಾಬ್ದಾರಿ ಇದೆ ಎಂದರು.
    ಉಪನ್ಯಾಸಕಿ ಕೆ.ಎನ್​.ವಿಮಲಾ ಅವರನ್ನು ಸನ್ಮಾನಿಸಲಾಯಿತು. ಗೌರವ ಕಾರ್ಯದರ್ಶಿ ಕೆ.ಎಸ್​.ಗಣೇಶ್​, ವೇಣುಗೋಪಾಲ್​, ಜಿಲ್ಲಾ ಕೋಶಾಧ್ಯಕ್ಷ ವಿನಯ್​ ಗಂಗಾಪುರ, ಮುರಳಿ ಮೋಹನ್​ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts