ಕಳಸ: ಕಳಸ-ಹೊರನಾಡು ಮಧ್ಯೆ ಹೆಬ್ಬೋಳೆ ಸಮೀಪ ಬುಧವಾರ ಭದ್ರಾ ನದಿಯಲ್ಲಿ ನಾಲ್ಕು ಕುರಿಗಳ ಕಳೇಬರ ಮತ್ತು ನದಿ ತೀರದಲ್ಲಿ ಪೂಜೆ ಮಾಡಿರುವ ಕುರುಹು ಪತ್ತೆಯಾಗಿದ್ದು, ದೊಡ್ಡ ಮಟ್ಟದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಮಂಗಳವಾರ ರಾತ್ರಿ ಕೃತ್ಯ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ನದಿಯ ದಡದಲ್ಲಿ ಕುಂಕುಮ, ಅರಶಿಣ, ಕಾಯಿ, ಲಿಂಬೆಹುಳಿ, ಹೂ, ಬಾಳೆಹಣ್ಣು ಮತ್ತಿತರ ಪೂಜಾ ಸಾಮಗ್ರಿ ಬಳಸಿ ಪೂಜೆ ಮಾಡಲಾಗಿದೆ. ಇದೇ ಸ್ಥಳದಲ್ಲಿ ನಾಲ್ಕು ಕುರಿಗಳ ತಲೆ ಕಡಿದು ನದಿಗೆ ಎಸೆದು ಹೋಗಿದ್ದಾರೆ. ಈ ಕುರುಹುಗಳನ್ನು ಕಂಡ ಸ್ಥಳೀಯರು ಕಳಸ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಪಿಡಿಒ ಕವೀಶ್, ಕಳಸ ಪಿಎಸ್ಐ ಬ್ರಮ್ಮಪ್ಪ ಬಿಳಗಲಿ, ಎಸ್ಐ ಮೋಹನ್ ರಾಜಣ್ಣ ಆಗಮಿಸಿ ಸ್ಥಳ ಪರಿಶೀಲಿಸಿದರು. ನದಿಯಲ್ಲಿದ್ದ ಕುರಿಯ ಕಳೇಬರಗಳನ್ನು ಮೇಲಕ್ಕೆ ತೆಗೆದು ಹೂಳಲಾಯಿತು.
ಕಳೆದ ಎರಡು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ಟೆಂಟ್ ಹಾಕಿ ಇಲ್ಲಿ ಪೂಜೆ ಮಾಡಲಾಗುತ್ತಿತ್ತು. ಮಧ್ಯ ರಾತ್ರಿ ಇಲ್ಲಿ ವಾಮಾಚಾರ ಮಾಡಲಾಗಿದೆ. ಸಾವಿರಾರು ಜನ ಕುಡಿಯುತ್ತಿರುವ ನೀರಿಗೆ ಕುರಿಗಳನ್ನು ಕಡಿದು ಹಾಕಿರುವುದು ಸರಿಯಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.