ಕಳಸ: ಒಂದು ವಾರದಿಂದ ಬಿಡುವು ನೀಡಿದ್ದ ಮಳೆ ಬುಧವಾರ ತಾಲೂಕಿನಾದ್ಯಂತ ಆರ್ಭಟಿಸಿತು.
ಮಂಗಳವಾರ ಸಂಜೆ ಶುರುವಾಗಿದ್ದ ಮಳೆ ಬುಧವಾರ ಎಡೆಬಿಡದೆ ಮಳೆ ಸುರಿಯಿತು. ಅಬ್ಬರದ ಮಳೆಯಿಂದ ಕಳಸದ ಓಣಿಗಂಡಿ ಎಂಬಲ್ಲಿ ನಿವೃತ್ತ ಶಿಕ್ಷಕ ಭಾಸ್ಕರ್ ಡೋಂಗ್ರೆ ಅವರ ಮನೆ ಪಕ್ಕದ ತಡೆಗೋಡೆ ಕುಸಿದಿದೆ. ಒಂದು ವರ್ಷದ ಹಿಂದೆಯಷ್ಟೆ ನಿರ್ಮಾಣ ಮಾಡಿದ್ದ ತಡೆಗೋಡೆ ಬಿದ್ದಿದ್ದು ಮನೆಯೂ ಬಿರುಕು ಬಿಟ್ಟಿದೆ. ಕಳಸ ಗಣಪತಿಕಟ್ಟೆ ಗೋಪಾಲ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಬಸ್ರಿಕಲ್ ಸಮೀಪ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ತೊಂದರೆ ಉಂಟಾಯಿತು. ಧಾರಾಕಾರ ಮಳೆಯಿಂದ ಹೊಳೆ, ಹಳ್ಳ, ತೊರೆಗಳು ತುಂಬಿ ಹರಿಯಲಾರಂಭಿಸಿವೆ. ಭದ್ರಾ ನದಿ ನೀರಿನ ಮಟ್ಟ ಹೆಚ್ಚಾಗಿದೆ.