ಚಿರಂಜೀವಿ ಸರ್ಜಾ ಅಭಿನಯದ ಚಿತ್ರಗಳ ಮುಂದಿನ ಕಥೆ ಏನು?
ಕಳೆದ ನಾಲ್ಕು ದಿನಗಳಿಂದ ಈ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಪ್ರಮುಖವಾಗಿ ಚಿರಂಜೀವಿ ಸರ್ಜಾ ಅಭಿನಯದ ರಾಜ ಮಾರ್ತಾಂಡ ಮತ್ತು ಕ್ಷತ್ರಿಯ ಚಿತ್ರಗಳೆರಡೂ ಪ್ರೊಡಕ್ಷನ್ ಹಂತದಲ್ಲಿದೆ. ಈ ಪೈಕಿ ರಾಜ ಮಾರ್ತಾಂಡ ಚಿತ್ರೀಕರಣ ಸಂಪೂರ್ಣವಾಗಿ, ಚಿರು ಡಬ್ಬಿಂಗ್ ಮಾತ್ರ ಬಾಕಿ ಇತ್ತಂತೆ. ಇನ್ನು ಕ್ಷತ್ರಿಯ ಚಿತ್ರದ ಅರ್ಧ ಚಿತ್ರೀಕರಣವಾಗಿದ್ದು, ಆ ಪೈಕಿ ಮೊದಲಾರ್ಧದ ಸಂಪೂರ್ಣವಾಗಿ ಡಬ್ಬಿಂಗ್ ಸಹ ಮಾಡಿದ್ದರಂತೆ.
ಇದನ್ನೂ ಓದಿ: ವರ್ಷಾರಂಭದಿಂದ ಚಿರಂಜೀವಿ ಸರ್ಜಾ ಹೆಸರು ಬದಲಾಗಿತ್ತು, ಗಮನಿಸಿದ್ದೀರಾ?
ಈಗ ಆ ಚಿತ್ರಗಳು ಹೇಗೆ ಮುಂದುವರೆಯುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಏಕೆಂದರೆ, ರಾಜ ಮಾರ್ತಾಂಡ ಚಿತ್ರದಲ್ಲಿ ಚಿರು ಇದ್ದಾರಾದರೂ, ಅವರ ಮಾತುಗಳಿಲ್ಲ. ಕೆಲವು ದಿನಗಳ ಹಿಂದಷ್ಟೇ ಚಿರು, ರಾಜ ಮಾರ್ತಾಂಡ ಚಿತ್ರವನ್ನು ನೋಡಿ, ಸದ್ಯದಲ್ಲೇ ಡಬ್ಬಿಂಗ್ ಮಾಡುವುದಾಗಿ ಹೇಳಿದ್ದರಂತೆ. ಆದರೆ, ಅಷ್ಟರಲ್ಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕ್ಷತ್ರಿಯ ಚಿತ್ರಕ್ಕೆ ಚಿರು ಅವರೇ ಮೊದಲಾರ್ಧದ ಅರ್ಧ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಹಾಗಾಗಿ ಇನ್ನುಳಿದ ಭಾಗದ ಡಬ್ಬಿಂಗ್ ಕಥೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜ.
ಈ ಮಧ್ಯೆ ಕನ್ನಡ ಚಿತ್ರರಂಗ ಧ್ರುವ ಸರ್ಜಾ ಕಡೆ ನೋಡುತ್ತಿದೆ. ಚಿರಂಜೀವಿ ಸರ್ಜಾ ಬಾಕಿ ಉಳಿಸಿದ ಡಬ್ಬಿಂಗ್ ಕೆಲಸವನ್ನು ಧ್ರುವ ಮುಗಿಸಿಕೊಡುತ್ತಾರಾ ಎಂದು ಕುತೂಹಲದಿಂದ ಕಾಯುತ್ತಿದೆ. ಈ ಹಿಂದೆ, ಶಂಕರ್ ನಾಗ್ ಅವರ ಅಪಘಾತದಲ್ಲಿ ಅಕಾಲಿಕ ನಿಧನರಾದಾಗ, ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದರು. ಈ ಪೈಕಿ ನಿಗೂಢ ರಹಸ್ಯ ಚಿತ್ರ ಸಹ ಒಂದು. ಆ ಚಿತ್ರಕ್ಕೆ ಶಂಕರ್ ನಾಗ್ ಅವರು ಡಬ್ಬಿಂಗ್ ಮಾಡಿರಲಿಲ್ಲವಾದ್ದರಿಂದ, ಅನಂತ್ ನಾಗ್ ಅವರು ಮುಂದೆ ಬಂದು ಡಬ್ಬಿಂಗ್ ಮುಗಿಸಿಕೊಟ್ಟಿದ್ದರು. ನಿಗೂಢ ರಹಸ್ಯ ಚಿತ್ರದಲ್ಲಿ ಶಂಕರ್ ನಾಗ್ ಅವರು ನಟಿಸಿದ್ದರಾದರೂ, ಅವರಿಗೆ ಧ್ವನಿ ನೀಡಿರುವುದು ಅನಂತ್ ನಾಗ್.
ಇದನ್ನೂ ಓದಿ: ಲಾಕ್ಡೌನ್ ಅವಧಿಯೇ ಚಿರು ಸಾವಿಗೆ ಮುಳುವಾಯ್ತಾ?; ಅದಕ್ಕೆ ಇಲ್ಲಿದೆ ಕಾರಣ …
ಚಿರಂಜೀವಿ ಮತ್ತು ಧ್ರುವ ಅವರ ಧ್ವನಿಯಲ್ಲಿ ಹೋಲಿಕೆ ಇರುವುದರಿಂದ, ಈಗ ಚಿರಂಜೀವಿ ಚಿತ್ರಗಳಿಗೆ ಧ್ರುವ ಮುಂದೆ ಬಂದು ಡಬ್ಬಿಂಗ್ ಮಾಡಿಕೊಡುತ್ತಾರಾ? ಎಂದು ಚಿತ್ರರಂಗ ಕಾಯುತ್ತಿದೆ. ಈ ಕುರಿತು ಎರಡೂ ಚಿತ್ರತಂಡಗಳು ಇನ್ನೂ ಧ್ರುವ ಜತೆಗೆ ಮಾತಾಡಿಲ್ಲವಂತೆ. ಹಾಗಾಗಿ ಈ ಕುರಿತು ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಮುಂದೆ ಮಾತುಕಥೆಗಳಾದ ಮೇಲೆ ಒಂದು ಸ್ಪಷ್ಟ ಚಿತ್ರಣ ಸಿಗಬಹುದೇನೋ?
ಆದರೂ ಚಿರಂಜೀವಿ ಅವರ ಎರಡು ಚಿತ್ರಗಳಿಗೆ ಧ್ರುವ ಅವರ ಧ್ವನಿ ಇರುತ್ತದೋ ಅಥವಾ ಬೇರೆ ಯಾರಾದರೂ ವೃತ್ತಿಪರ ಕಲಾವಿದರಿಂದ ಡಬ್ಬಿಂಗ್ ಕೆಲಸ ಮಾಡಿಸಲಾಗುತ್ತದಾ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಸಾಯಿ ಪಲ್ಲವಿಯವರ ಫಸ್ಟ್ ಸಿನಿಮಾ ಪ್ರೇಮಂ ಅಲ್ಲ: ಮೊದಲ ಚಿತ್ರದಲ್ಲೇ ಆಗಿತ್ತಂತೆ ಕೆಟ್ಟ ಅನುಭವ