ಬೆಳಗಾವಿ: ರಸ್ತೆಯಲ್ಲಿ ಹೊತ್ತಿ ಉರಿಯುತ್ತಿದ್ದ ಟ್ರ್ಯಾಕ್ಟರ್, ಛಿದ್ರಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವ್ಯಕ್ತಿಯ ದೇಹ… ಈ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಇಂತಹದ್ದೊಂದು ದುರ್ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಚಿಗಡ ಗ್ರಾಮದ ಹೊರವಲಯದಲ್ಲಿ ಬುಧವಾರ ಸಂಭವಿಸಿದೆ. ಖಾನಾಪೂರದ ಅಭಯಾರಣ್ಯದಲ್ಲಿ ಕಾಡು ಹಂದಿಯನ್ನು ಬೇಟೆಯಾಡಲು ಮಂಗಳವಾರ ರಾತ್ರಿ ಹೋಗಿದ್ದ ಯುವಕರಿಬ್ಬರು ಬುಧವಾರ ವಾಪಸ್ ಮನೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾಡು ಪ್ರಾಣಿಯನ್ನು ಕೊಲ್ಲಲು ತಾವು ಕೊಂಡೊಯ್ದಿದ್ದ ಸಾವಿನ ಕೂಪದ ಅಸ್ತ್ರದಲ್ಲಿ ದುರಾದೃಷ್ಟವಶಾತ್ ತಾವೇ ಸಿಕ್ಕಿ ಆ ಪೈಕಿ ಓರ್ವ ಧಾರುಣ ಅಂತ್ಯ ಕಂಡಿದ್ದಾನೆ.
ಕಾಡುಹಂದಿ ಬೇಟೆಯ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯ ಹಕ್ಕಿಪಿಕ್ಕಿ ಜನಾಂಗದ ಕೆಲ ಯುವಕರು ಕಳೆದ ಕೆಲದಿನಗಳಿಂದ ತಾಲೂಕಿನ ಬೀಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ನಿತ್ಯವೂ ರಾತ್ರಿ ವೇಳೆಯಲ್ಲಿ ಖಾನಾಪುರದ ಅರಣ್ಯ ಪ್ರದೇಶ ಮತ್ತು ಅರಣ್ಯದಂಚಿನ ಕೃಷಿ ಜಮೀನುಗಳಿಗೆ ತೆರಳಿ, ಅಲ್ಲಿ ಜಿಲೆಟಿನ್ ಬಾಂಬ್ ಹುದುಗಿಸಿಟ್ಟು ಕಾಡುಹಂದಿಗಳನ್ನು ಬೇಟೆಯಾಡುತ್ತಿದ್ದರು.
ಆಗಿದ್ದೇನು?: ಶಿವಮೊಗ್ಗ ಮೂಲದ ಹಕ್ಕಿಪಿಕ್ಕಿ ಹಟ್ಟಿಯ ಗಿರೀಶ ರಜಪೂತ(28) ಮತ್ತು ಬಿಜಗಣಿರ್ ಗ್ರಾಮದ ಶಿವಕುಮಾರ ರಜಪೂತ (27) ಇಬ್ಬರೂ ಮಂಗಳವಾರ ರಾತ್ರಿ ಕಾಡುಹಂದಿಯನ್ನು ಬೇಟೆಯಾಡಲು ಸ್ಫೋಟಕ ವಸ್ತುವಿನೊಂದಿಗೆ ಕಾಡಿಗೆ ಹೋಗಿದ್ದರು. ತಾಲೂಕಿನ ಮಾಚಿಗಡ-ಪಡಲವಾಡಿ-ಹಲಸಾಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾಡುಹಂದಿ ಬೇಟೆಗಾಗಿ ಜಿಲೆಟಿನ್ ಬಾಂಬ್ ಹುದುಗಿಸಿಟ್ಟು ಮರಳಿ ಬೀಡಿ ಗ್ರಾಮಕ್ಕೆ ಬಂದಿದ್ದರು. ಬುಧವಾರ ಬೆಳಗ್ಗೆ ಬಾಂಬ್ ಹುದುಗಿಸಿಟ್ಟ ಸ್ಥಳಗಳಿಗೆ ತೆರಳಿದಾಗ, ಅವರ ಪ್ರಯತ್ನಕ್ಕೆ ಕಾಡುಹಂದಿ ಸತ್ತಿರಲಿಲ್ಲ. ಹೀಗಾಗಿ ಜಿಲೆಟಿನ್ ಬಾಂಬ್ ಸಮೇತ ಬೈಕ್ನಲ್ಲಿ ಮರಳಿ ಬೀಡಿ ಗ್ರಾಮದತ್ತ ತೆರಳುತ್ತಿದ್ದರು.
ಬಿಜಗರ್ಣಿ ಗ್ರಾಮದ ಬಳಿ ಇವರ ಬೈಕ್ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ಗೆ ಗುದ್ದಿದ್ದರಿಂದ ಇವರ ಬಳಿಯಿದ್ದ ಬಾಂಬ್ ಇರುವ ಚೀಲ ಟ್ರ್ಯಾಕ್ಟರ್ ಚಕ್ರದ ಕೆಳಗೆ ಸಿಲುಕಿ ಸ್ಫೋಟಗೊಂಡಿದೆ. ಇದರಿಂದಾಗಿ ಬೈಕ್ನಲ್ಲಿ ಹಿಂದೆ ಕುಳಿತಿದ್ದ ಗಿರೀಶನ ದೇಹ ಇಬ್ಭಾಗವಾಗಿದೆಯಲ್ಲದೆ ಛಿದ್ರಗೊಂಡು ರಸ್ತೆ ಪಕ್ಕದ ಕೃಷಿಭೂಮಿಯಲ್ಲಿ ಬಿದ್ದಿದೆ. ಸ್ಫೋಟದ ತೀವ್ರತೆಗೆ ರಸ್ತೆಯಿಂದ 20 ಅಡಿ ದೂರದಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ.
ಆಕಸ್ಮಿಕವಾಗಿ ನಡೆದ ಈ ಟನೆಯಿಂದಾಗಿ ತಾಲೂಕಿನ ಅರಣ್ಯದಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಅಕ್ರಮ ಚಟುವಟಿಕೆ ಬಹಿರಂಗಗೊಂಡಿದೆ. ಘಟನಾ ಸ್ಥಳಕ್ಕೆ ಸಿಪಿಐ ಸುರೇಶ ಶಿಂಗಿ ಹಾಗೂ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಫೋಟಕಗಳನ್ನು ಇಟ್ಟು ಮೂಕಪ್ರಾಣಿಗಳನ್ನು ಕೊಲ್ಲುತ್ತಿದ್ದವರು ಇದೀಗ ಅದೇ ಸ್ಫೋಟಕದ ಸಾವಿನ ಕೂಪಕ್ಕೆ ಸಿಲುಕಿದ್ದು ವಿಪರ್ಯಾಸ.
ದುಡ್ಡು ಸಿಗುತ್ತೆ ಅಂತ ಗಂಡನ ಮನೆಗೆ ಓಡೋಡಿ ಬಂದವಳು ಆ ಮನೆಯಲ್ಲೇ ಹೆಣವಾದಳು!
ಮೃತದೇಹವನ್ನೂ ಬಿಡಲಿಲ್ಲ ವಿಕೃತ ಕಾಮಿ! ಗೃಹಿಣಿಯ ಕೊಲೆ ರಹಸ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ