ನಾಗಮಂಗಲ: ಪಟ್ಟಣದ 8ನೇ ವಾರ್ಡ್ನಲ್ಲಿ ಗುರುವಾರ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಇಬ್ಬರು ಮಕ್ಕಳು ಹಾಗೂ ಪತ್ನಿಗೆ ವಿಷವುಣಿಸಿ ಕೊಂದು ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
8ನೇ ವಾರ್ಡ್ನ ನಿವಾಸಿಗಳಾದ ಕೀರ್ತನಾ(23), ಜಯಸಿಂಹ(4) ಮತ್ತು ರಿಷಿಕಾ (2) ತಂದೆಯ ಕೃತ್ಯಕ್ಕೆ ಬಲಿಯಾದವರು. ತಾಲೂಕಿನ ತೆಂಗಿನಭಾಗ ಗ್ರಾಮದ ನರಸಿಂಹ (35) ಆರೋಪಿ. ಆರೋಪಿಯು ಮೂವರಿಗೂ ವಿಷವುಣಿಸಿ ನಂತರ ತಾನೂ ನೇಣು ಹಾಕಿಕೊಳ್ಳಲು ಯತ್ನಿಸಿ ವಿಫಲನಾಗಿದ್ದಾನೆ.
ನೆಯಲ್ಲಿ ಪತ್ನಿಯೊಂದಿಗೆ ಜೋರಾಗಿ ಜಗಳ ಮಾಡುತ್ತಿದ್ದದ್ದನ್ನು ನೆರೆಹೊರೆಯವರು ಕೇಳಿಸಿಕೊಂಡಿದ್ದರು. ಸ್ವಲ್ಪ ಸಮಯದ ನಂತರ ಮನೆಯಿಂದ ಶಬ್ದ ಬಾರದೆ ಇದ್ದುದ್ದರಿಂದ ಅನುಮಾನಗೊಂಡು ಹೋಗಿ ನೋಡಿದಾಗ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಒದ್ದಾಡುತ್ತಿದ್ದ ನರಸಿಂಹನನ್ನು ಕಂಡು ಆಸ್ಪತ್ರೆಗೆ ದಾಖಲಿಸಿದರು. ನಂತರ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದರು.
ಆರೋಪಿಯು ಅತಿಯಾಗಿ ಸಾಲ ಮಾಡಿಕೊಂಡಿದ್ದ, ಅಕ್ರಮ ಸಂಬಂಧವಿಟ್ಟುಕೊಂಡಿದ್ದನಲ್ಲದೆ, ಕೀರ್ತನಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಮೃತ ಕೀರ್ತನಾಳ ಪಾಲಕರು ಆರೋಪಿಸಿದ್ದಾರೆ.
ಸ್ಥಳಕ್ಕೆ ತಹಸೀಲ್ದಾರ್ ನಯೀಂಉನ್ನಿಸಾ, ಡಿವೈಎಸ್ಪಿ ಹಾಗೂ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.
ಸಚಿವ ಭೇಟಿ: ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ಹೇಳಿದರು.