More

    ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ, ಆಸ್ಪತ್ರೆಯಲ್ಲಿ ಮಹಿಳೆ ಸಾವು

    ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದಲ್ಲಿ ಮನೆಯ ಗಲಾಟೆಯಿಂದ ಆಕ್ರೋಶಗೊಂಡ ಪತಿರಾಯನೊಬ್ಬ  ಹೆಂಡತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಗಂಭೀರ ಸುಟ್ಟು ಗಾಯಗಳಿಂದ ಮಹಿಳೆಯು ಮೃತಪಟ್ಟಿದ್ದಾಳೆ

    ಬೆಂಗಳೂರು ರಸ್ತೆಯ ವೈ.ಎಸ್.ಗುಂಡಪ್ಪ ಬಡಾವಣೆಯ ತಿರುಮಳಮ್ಮ (27) ಮೃತಳು. ಆರೋಪಿ ಮುರಳಿ (22). ಶೇ.80 ರಷ್ಟು ಸುಟ್ಟು ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಇನ್ನು ಚಿಂತಾಮಣಿ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಗಾಯಗಳಿಂದಾಗಿ ಆರೋಪಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಕಳೆದ 9 ವರ್ಷಗಳ ಹಿಂದೆ ಇಬ್ಬರು ಪ್ರೀತಿಸಿ, ಅಂತರ್ಜಾತಿ ವಿವಾಹವಾಗಿದ್ದರು. ದಂಪತಿಗೆ 8 ವರ್ಷದ ಹೆಣ್ಣು ಮಗು ಮತ್ತು 6 ವರ್ಷದ ಗಂಡು ಮಗು ಸೇರಿದಂತೆ ಇಬ್ಬರು ಮಕ್ಕಳು ಇದ್ದಾರೆ. ಇತ್ತೀಚೆಗೆ ಸಣ್ಣಪುಟ್ಟ ವಿಚಾರಗಳಿಗೂ ಗಂಡ ಹೆಂಡತಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ದಾಂಪತ್ಯ ಕಲಹ ಸಂಸಾರದ ನೆಮ್ಮದಿಯನ್ನು ಕೆಡಿಸಿತ್ತು.

    ಕಳೆದ ಶುಕ್ರವಾರ ರಾತ್ರಿ ಮಗನ ವಿಚಾರವಾಗಿ ದಂಪತಿಯ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಒಂದು ವಾರದಿಂದಲೂ ಮಗ ನಾಪತ್ತೆಯಾಗಿರುವುದನ್ನು ಪ್ರಸ್ತಾಪಿಸಿದ ತಿರುಮಳಮ್ಮ ಗಂಡನ ಬಗ್ಗೆ ಅನುಮಾನಗೊಂಡು ಪ್ರಶ್ನಿಸಿದ್ದಾಳೆ. ಇದಕ್ಕೆ ಕೋಪಗೊಂಡ ಮುರಳಿ ಪೆಟ್ರೋಲ್ ತೆಗೆದುಕೊಂಡು ಬಂದು ಪತ್ನಿಯ ಮೇಲೆ ಸುರಿದು, ತಾನು ಬೆಂಕಿ ಹಚ್ಚಿಕೊಂಡಿದ್ದಾನೆ. ಚಿಂತಾಮಣಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts