ಕೊಚ್ಚಿ: ಟೀಮ್ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್ ಮತ್ತೊಮ್ಮೆ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ‘ನಾನು ಪಾರ್ಟಿ ಮಾಡುತ್ತಿದ್ದಾಗಲೇ 2 ಲಕ್ಷ ರೂ. ಖರ್ಚು ಮಾಡುತ್ತಿದ್ದೆ. ಹಾಗಿರುವಾಗ ನಾನೇಕೆ ಕೇವಲ 10 ಲಕ್ಷ ರೂಪಾಯಿಗೆ ಫಿಕ್ಸಿಂಗ್ ಮಾಡುತ್ತಿದ್ದೆ’ ಎಂಬ ಪ್ರಶ್ನೆಯೊಂದಿಗೆ ಶ್ರೀಶಾಂತ್, ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಒಂದು ಓವರ್ನಲ್ಲಿ 14 ರನ್ ಬಿಟ್ಟುಕೊಡುವುದಕ್ಕಾಗಿ 10 ಲಕ್ಷ ರೂಪಾಯಿ ತೆಗೆದುಕೊಂಡಿದ್ದರು ಎಂಬ ದೆಹಲಿ ಪೊಲೀಸರು ಈ ಹಿಂದೆ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶ್ರೀಶಾಂತ್, ‘ನಾನು ಆ ಪಂದ್ಯದ ಓವರ್ನಲ್ಲಿ ಮೊದಲ 4 ಎಸೆತಗಳಲ್ಲಿ 5 ರನ್ ಬಿಟ್ಟುಕೊಟ್ಟಿದ್ದೆ. ನೋಬಾಲ್, ವೈಡ್ ಅಥವಾ ನಿಧಾನಗತಿಯ ಎಸೆತ ಎಸೆದಿರಲಿಲ್ಲ. ನನ್ನ ಕಾಲಿನ ಬೆರಳಿಗೆ ಸರ್ಜರಿ ಆಗಿದ್ದ ನಡುವೆಯೂ 130 ಪ್ಲಸ್ ಕಿಲೋ ಮೀಟರ್ ವೇಗದಲ್ಲಿ ಚೆಂಡು ಎಸೆಯುತ್ತಿದ್ದೆ. ಉಳಿದ 2 ಎಸೆತಗಳಲ್ಲಿ ಅಷ್ಟೊಂದು ರನ್ ಬಿಟ್ಟುಕೊಡಲು ಹೇಗೆ ಸಾಧ್ಯವಾಗುತ್ತಿತ್ತು’ ಎಂದು ವಿವರಿಸಿದ್ದಾರೆ.
ಆ ಸಮಯದಲ್ಲಿ ಭಾರತ ತಂಡಕ್ಕೆ ಮರಳುವುದು ತಮ್ಮ ಪ್ರಮುಖ ಆದ್ಯತೆಯಾಗಿತ್ತು ಎಂದೂ ವಿವರಿಸಿರುವ ರಾಜಸ್ಥಾನ ರಾಯಲ್ಸ್ ಮಾಜಿ ಆಟಗಾರ ಶ್ರೀಶಾಂತ್, ‘ನಾನು ಇರಾನಿ ಟ್ರೋಫಿಯಲ್ಲಿ ಆಡಿದ್ದೆ ಮತ್ತು ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದೆ’ ಎಂದು ಹೇಳಿದ್ದಾರೆ.
‘ನಾನು ಯಾವಾಗಲೂ ಕಾರ್ಡ್ ಮೂಲಕವೇ ಹಣ ಸಂದಾಯ ಮಾಡುತ್ತಿದ್ದೆ. ನಗದು ತೆಗೆದುಕೊಂಡು ಹೋಗುತ್ತಿರಲಿಲ್ಲ. ನಾನು ಜೀವನದಲ್ಲಿ ಸಾಕಷ್ಟು ಜನರಿಗೆ ನೆರವು ನೀಡಿರುವೆ. ಅವರ ಪ್ರಾರ್ಥನೆಗಳಿಂದಾಗಿಯೇ ನಾನು ಹೊರಬಂದಿದ್ದೇನೆ’ ಎಂದು ಶ್ರೀಶಾಂತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಫಿಕ್ಸಿಂಗ್ ಪ್ರಕರಣದಲ್ಲಿ ಮೊದಲಿಗೆ ಆಜೀವ ನಿಷೇಧಕ್ಕೊಳಗಾಗಿದ್ದ ಶ್ರೀಶಾಂತ್ ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋಗಿ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಿಕೊಂಡಿದ್ದರು. ಕಳೆದ ವರ್ಷ ಅವರು ನಿಷೇಧ ಮುಕ್ತರಾಗಿ ಸ್ಪರ್ಧಾತ್ಮಕ ಕ್ರಿಕೆಟ್ಗೂ ಮರಳಿದ್ದರು.
@sreesanth36 finally reveals what really happened on IPL Spot-fixing incident | IPL Spot Fixing #IPL2021 #SpotFixing pic.twitter.com/8LRWmBBfCt
— Sportskeeda India (@Sportskeeda) September 28, 2021