More

    ಕುಂಬ್ಳಕಾಯಿ ಕಳ್ಳ ಅಂದ್ರೆ ಸುಮಲತಾ ಏಕೆ ಹೆಗ್ಲುಮುಟ್ಟಿ ನೋಡ್ಕೊಳ್‌ಬೇಕು?

    ಬೆಂಗಳೂರು: ಅಂಬರೀಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಏನು ಅನ್ಯಾಯ ಮಾಡಿದರು? ಡಿ.ಕೆ. ಶಿವಕುಮಾರ್ ಅವರು ಹೀಗೇಕೆ ಮಾತನಾಡುತ್ತಾರೆ ಎಂಬ ಸಂಸದೆ ಸುಮಲತಾ ಮಾತಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
    ಅಂಬರೀಷ್ ಅವರಿಗೆ ಕಾಂಗ್ರೆಸ್ ಏನು ಮಾಡಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಕೊನೆಯುಸಿರು ಬಿಡುವ ವೇಳೆಯಲ್ಲಿ ಏನು ಹೇಳಿದರು ಎಂಬುದು ಗೊತ್ತಿದೆ. ನಾವು ಈಗ ಆ ವಿಚಾರಗಳನ್ನು ಮಾತನಾಡುವುದಿಲ್ಲ ಎಂದು ಹೇಳಿದರು.
    ಎಚ್.ಡಿ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ‘ವಿಷ’ ಹೇಳಿಕೆ ನೀಡಿದ್ದೇನೆ. ಕುಂಬಳಕಾಯಿ ಕಳ್ಳ ಎಂದರೆ ಸುಮಲತಾ ಅವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು? ನಾನು ಸುಮಲತಾ ಅವರ ಸುದ್ದಿಗೆ ಹೋಗಿಲ್ಲ, ಅವರ ಸುದ್ದಿ ನನಗೆ ಅವಶ್ಯಕತೆ ಇಲ್ಲ. ನಾನು ಸುಮಲತಾ ಅವರ ವಿಚಾರಕ್ಕೆ ಇಂದು ಹೋಗಲ್ಲ, ನಾಳೆಯೂ ಹೋಗಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಅವರ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು. ಪಕ್ಷದ ಸಿದ್ದಾಂತದ ಬಗ್ಗೆ ಮಾತನಾಡಲಿ, ಉತ್ತರ ಕೊಡುತ್ತೇನೆ ಎಂದರು.
    ಇರೋದೊಂದೇ ಗ್ಯಾರಂಟಿ ಗಾಳಿ
    ಇಡೀ ರಾಜ್ಯದಲ್ಲಿ ಯಾವ ಮೋದಿ ಅಲೆಯೂ ಇಲ್ಲ, ಬಿಜೆಪಿ ಅಲೆಯೂ ಇಲ್ಲ. ಇರುವುದು ಒಂದೇ ಗಾಳಿ, ಅದು ಕಾಂಗ್ರೆಸ್, ಗ್ಯಾರಂಟಿ ಗಾಳಿ ಎಂದು ಡಿ.ಕೆ ಶಿವಕುಮಾರ್ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
    ನಾನು ಮತ್ತು ಸಿದ್ದರಾಮಯ್ಯ ಅವರು ಗ್ಯಾರಂಟಿ ಚೆಕ್ಕಿಗೆ ಸಹಿ ಹಾಕಿ, ಅನುಷ್ಠಾನಕ್ಕೆ ತಂದಿದ್ದೇವೆ. ಕಾಂಗ್ರೆಸ್ ಜನರ ಸಹಕಾರದಿಂದ 136 ಸ್ಥಾನಗಳನ್ನು ಗೆದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ದೇಶದ ಯಾವ ರಾಜ್ಯಗಳು ಮಾಡದ ಕೆಲಸವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಜನರ ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ ಎಂದರು.
    ಜನರ ಕಲ್ಯಾಣಕ್ಕೆ ಎಂದು 52 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕದ ಪಾಲಿನ ಹಣ ಕೊಡಲಿಲ್ಲ. ಇದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts