ಬೆಂಗಳೂರು: ರಾಜಕಾರಣಿಯೊಬ್ಬರ ಹೆಸರು ಸೇರಿದಂತೆ ಪ್ರಭಾವಿಗಳ ಹೆಸರು ಉಲ್ಲೇಖಿಸಿ ವ್ಯಕ್ತಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಸಂಚಲನ ಸೃಷ್ಟಿಸಿತ್ತು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಬಳಿಯ ಅಮಲೀಪುರದ ನಿವಾಸಿ ಪ್ರದೀಪ್ (47) ಆತ್ಮಹತ್ಯೆಗೆ ಶರಣಾಗಿದ್ದು ಸಾವಿಗೂ ಮುನ್ನ ಮಾಜಿ ಸಚಿವ ಹಾಗೂ ಐವರು ಉದ್ಯಮಿಗಳ ಹೆಸರನ್ನು ಡೆತ್ನೋಟ್ನಲ್ಲಿ ಬರೆದಿದ್ದರು. ಅಂದ ಹಾಗೆ ಇವರು ಯಾವ ಕಾರಣ ಕೊಟ್ಟು ಗನ್ ಪಡೆದರು ಎನ್ನುವ ಮಾಹಿತಿಯೂ ಬಹಿರಂಗವಾಗಿದೆ.
ತಲೆಗೆ ಗುಂಡು ಹಾರಿಸಿಕೊಂಡ ಉದ್ಯಮಿ ಪ್ರದೀಪ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಮೂರು ಡೆತ್ ನೋಟ್ ಪತ್ತೆಯಾಗಿವೆ. ಒಂದು ಕಡೆ ಮಿಸ್ ಆದರೂ ಮತ್ತೊಂದು ಕಡೆ ಡೆತ್ ನೋಟ್ ಸಿಗಬೇಕು, ತನಗಾದ ಅನ್ಯಾಯ ಸಮಾಜಕ್ಕೆ ಗೊತ್ತಾಗಬೇಕು ಅಂತ ಈ ರೀತಿ ಮೂರು ಡೆತ್ ನೋಟ್ ಬರೆಯುವ ನಿರ್ಧಾರವನ್ನು ಉದ್ಯಮಿ ಮಾಡಿದ್ದರು ಎನ್ನುವುದು ತಿಳಿದುಬಂದಿದೆ.
ಹಾಗಾದ್ರೆ ಉದ್ಯಮಿ ಪ್ರದೀಪ್ ಯಾವಾಗ ಯಾಕೆ ಗನ್ ಪಡೆದಿದ್ರು? ಗನ್ ಲೈಸೆನ್ಸ್ ಗೆ ಅಪ್ಲೆ ಮಾಡುವಾಗ ಏನೆಲ್ಲಾ ಕಾರಣಗಳನ್ನು ನೀಡಿದ್ರು? 2017-18 ರಲ್ಲಿ ಬೆಳ್ಳಂದೂರಿನಲ್ಲಿ ಉದ್ಯಮಿ ಪ್ರದೀಪ್, ಓಪೋಸ್ ಅನ್ನೋ ಪಬ್ ತೆರೆಸಿದ್ದರು. ತನ್ನ ಐವರು ಸ್ನೇಹಿತರ ಜೊತೆಗೂಡಿ 2.25 ಕೋಟಿ ಬಂಡವಾಳ ಹಾಕಿ ಪಬ್ ಶುರು ಮಾಡಿದ್ದರು. ಓಪೋಸ್ ಪಬ್ ತೆರೆಯುವಾಗ ಗನ್ ಸೈಲೆನ್ಸ್ಗೆ ಅರ್ಜಿ ಸಲ್ಲಿಸಿದ್ದರು.
‘ಉದ್ಯಮಿ ಆಗಿದ್ದ ಕಾರಣಕ್ಕೆ ವ್ಯವಹಾರ ನಿಮಿತ್ತವಾಗಿ ಓಡಾಡುತ್ತಾ ಇರ್ತೀನಿ. ಹೀಗಾಗಿ ಗನ್ ಲೈಸನ್ಸ್ ಕೊಡಿ’ ಎಂದು ಹೇಳಿ ಉದ್ಯಮಿ ಪ್ರದೀಪ್ ಅರ್ಜಿ ಸಲ್ಲಿಸಿದ್ದರು. 2018ರಿಂದ ಪ್ರತಿ ವರ್ಷವೂ ಗನ್ ಲೈಸೆನ್ಸ್ ರಿನಿವಲ್ ಮಾಡಿಸುತ್ತಾ ಇದ್ದರು. ಕೋವಿಡ್ ನಿಂದ 2019 ರಲ್ಲಿ ಪಬ್ ಕ್ಲೋಸ್ ಆಗಿದ್ದು ಇದುವರೆಗೂ ಓಪನ್ ಆಗಿಲ್ಲ. ಆದರೆ 2022ರಲ್ಲಿಯೂ ಪ್ರದೀಪ್, ಗನ್ ಲೈಸೆನ್ಸಸ್ ರಿನಿವಲ್ ಮಾಡಿಕೊಂಡಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಗನ್ ಲೈಸೆನ್ಸ್ಗೆ ಅರ್ಜಿ ಸಲ್ಲಿಸುವಾಗ ಇವರಿಗೆ ಯಾವುದಾದರು ರೀತಿಯ ಬೆದರಿಕೆಗಳು ಇದ್ದವೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.