ಬೆಂಗಳೂರು: ರಾಜಕಾರಣಿಯೊಬ್ಬರ ಹೆಸರು ಸೇರಿದಂತೆ ಪ್ರಭಾವಿಗಳ ಹೆಸರು ಉಲ್ಲೇಖಿಸಿ ವ್ಯಕ್ತಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಸಂಚಲನ ಸೃಷ್ಟಿಸಿತ್ತು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಬಳಿಯ ಅಮಲೀಪುರದ ನಿವಾಸಿ ಪ್ರದೀಪ್ (47) ಆತ್ಮಹತ್ಯೆಗೆ ಶರಣಾಗಿದ್ದು ಸಾವಿಗೂ ಮುನ್ನ ಮಾಜಿ ಸಚಿವ ಹಾಗೂ ಐವರು ಉದ್ಯಮಿಗಳ ಹೆಸರನ್ನು ಡೆತ್ನೋಟ್ನಲ್ಲಿ ಬರೆದಿದ್ದರು.
ಇದೀಗ ಬಯಲಾಗಿರುವ ಸಂಗತಿ ಏನೆಂದರೆ ತಲೆಗೆ ಗುಂಡು ಹಾರಿಸಿಕೊಂಡ ಉದ್ಯಮಿ ಪ್ರದೀಪ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಮೂರು ಡೆತ್ ನೋಟ್ ಪತ್ತೆಯಾಗಿವೆ. ಒಂದು ಕಡೆ ಮಿಸ್ ಆದರೂ ಮತ್ತೊಂದು ಕಡೆ ಡೆತ್ ನೋಟ್ ಸಿಗಬೇಕು, ತನಗಾದ ಅನ್ಯಾಯ ಸಮಾಜಕ್ಕೆ ಗೊತ್ತಾಗಬೇಕು ಅಂತ ಈ ರೀತಿ ಮೂರು ಡೆತ್ ನೋಟ್ ಬರೆಯುವ ನಿರ್ಧಾರವನ್ನು ಉದ್ಯಮಿ ಮಾಡಿದ್ದರು ಎನ್ನುವುದು ತಿಳಿದುಬಂದಿದೆ.
ಇವರು ನ್ಯೂ ಇಯರ್ ಸೆಲೆಬ್ರೇಷನ್ ಬಳಿಕ ಮೂರು ಡೆತ್ ನೋಟ್ ಬರೆದಿದ್ದರು. ಹೊಸ ವರ್ಷದ ದಿನ ರೆಸಾರ್ಟ್ನಿಂದ ಮನೆಗೆ ಬಂದಿದ್ದ ಪ್ರದೀಪ್ ಮೂರು ಡೆತ್ ನೋಟ್ ಗಳಲ್ಲಿ ಒಂದನ್ನು ಪತ್ನಿ ನಮಿತಾ ವಾರ್ಡ್ರೋಬ್ನಲ್ಲಿ ಇಟ್ಟಿದ್ದರು. ಬಳಿಕ ರೆಸಾರ್ಟ್ಗೆ ತೆರಳಿ, ಸಂಬಂಧಿಕರ ಕಾರಿನ ವೈಪರ್ ಬಳಿ ಒಂದನ್ನ ಇಟ್ಟಿದ್ದರು. ಬಳಿಕ ಮತ್ತೊಂದು ಡೆತ್ ನೋಟನ್ನು ತನ್ನ ಕಾರಿನಲ್ಲಿ ಇಟ್ಟುಕೊಂಡಿದ್ದರು.
ಅಷ್ಟೇ ಅಲ್ಲದೇ ಪ್ರದೀಪ್, ತನ್ನ ಡೆತ್ ನೋಟ್ ಜೊತೆಗೆ ಬ್ಯಾಂಕ್ ದಾಖಲೆಗಳನ್ನು ಕೂಡ ಅಟ್ಯಾಚ್ ಮಾಡಿದ್ದರು. ಅದನ್ನ ಗಮನಿಸದ ಸಂಬಂಧಿಕರು ಜನವರಿ 1ರ ಸಂಜೆ ನಾಲ್ಕು ಗಂಟೆಗೆ ರೆಸಾರ್ಟ್ ನಿಂದ ಹೊರಟಿದ್ದರು.
ಅದನ್ನು ಕಂಡ ಪ್ರದೀಪ್, ಸಂಬಂಧಿಕರು ಹೋಗ್ತಿದ್ದ ಕಾರನ್ನ ಓವರ್ ಟೇಕ್ ಮಾಡಿ ಮುನ್ನುಗ್ಗಿದ್ದರು. ಬಳಿಕ ಒಂದು ಕಿ.ಮೀ ದೂರದಲ್ಲಿ ನಿಟ್ಟಿಗೆರೆ ಎಂಬಲ್ಲಿ ಸಂಬಂಧಿಕರು ಹಿಂದೆ ಬರ್ತಿರೋದನ್ನ ಖಾತ್ರಿ ಮಾಡಿಕೊಂಡು ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರದೀಪ್ ಕಾರಿನ ಬಳಿ ಬಂದ ಸಂಬಂಧಿಕರು ಒಳಗೆ ನೋಡಿದಾಗ ಇವರು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಉದ್ಯಮಿ ಪ್ರದೀಪ್. ತಾನು ಆತ್ಮಹತ್ಯೆ ಮಾಡಿಕೊಂಡರೆ ಅನಾಥ ಶವ ಆಗಬಾರದು ಅನ್ನೋ ಕಾರಣಕ್ಕೆ ಇಷ್ಟೇಲ್ಲಾ ಸರ್ಕಸ್ ಮಾಡಿದ್ದರು.
ಘಟನೆ ಪೊಲೀಸರಿಗೆ ಬಂದಿದ್ವು ಹಲವು ಒತ್ತಡ ಕರೆಗಳು ಬಂದಿದ್ದವು. ಶಾಸಕರ ಹೆಸರನ್ನು ತೆಗೆಯುವಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಂದಲೇ ಕರೆ ಬಂದಿತ್ತು. ಆದ್ರೆ ಅಷ್ಟರಲ್ಲಿ ಕಗ್ಗಲೀಪುರ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆಗಲೇ ನೋಡಿ ಶುರುವಾಗಿದ್ದು ಅಸಲಿ ಡ್ರಾಮಾ..!
ದೂರು ಕೊಟ್ಟಿದ್ದ ಪ್ರದೀಪ್ ಪತ್ನಿ ನಮಿತಾ, ದೂರು ವಾಪಸ್ಸು ಪಡೆಯುವುದಾಗಿ ಕೇವಲ ಒಂದು ಗಂಟೆಯ ಒಳಗಾಗಿ ಹೇಳಿಕೆ ನೀಡಿದ್ದಾರೆ! ಹೀಗಾಗಿ ಪ್ರದೀಪ್ ಪತ್ನಿಯ ಮೇಲೂ ಪೊಲೀಸರಿಗೆ ಅನುಮಾನ ಶುರುವಾಗಿದೆ ಎನ್ನಲಾಗುತ್ತಿದೆ. ಪ್ರದೀಪ್ ಪತ್ನಿಯ ಮೊಬೈಲ್ ನಂಬರ್ನ ಸಿಡಿಆರ್ ಪರಿಶೀಲನೆ ನಡೆದಿದೆ.
ದೂರು ಕೊಟ್ಟು ಯಾಕೆ ವಾಪಸ್ ಪಡೆಯುತ್ತೇನೆ ಎಂದಿದ್ದು, ದೂರು ಕೊಟ್ಟ ಬಳಿಕ ಯಾರು ಕಾಲ್ ಮಾಡಿದ್ದು? ಸ್ವಂತ ಗಂಡನನ್ನು ಕಳೆದುಕೊಂಡು ದೂರು ಬೇಡ ಅಂದಿದ್ದು ಯಾಕೆ? ಎಂದೆಲ್ಲ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ. ಹೀಗಾಗಿ ಆರೋಪಿಗಳ ಮೊಬೈಲ್ ನಂಬರ್ ಜೊತೆಗೆ ನಮಿತಾ ನಂಬರ್ ನ ಸಿಡಿಆರ್ ಪರಿಶೀಲನೆ ಕೂಡ ನಡೆಯುತ್ತಿದೆ. ಇಂದು ಐವರು ಸ್ನೇಹಿತರಿಗೂ ಕಗ್ಗಲೀಪುರ ಪೊಲೀಸರು ನೊಟೀಸ್ ನೀಡಲಿದ್ದಾರೆ. ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲು ಪೊಲೀಸರು ಎಲ್ಲಾ ಸಿದ್ದತೆ ನಡೆಸಿದ್ದಾರೆ.