ಕೋಲ್ಕತ್ತ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜ.13ರಂದು ಕರೆದಿರುವ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳದೆ ಇರಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಾಗೂ ವಿವಿಧ ಯೂನಿವರ್ಸಿಟಿಗಳ ಕ್ಯಾಂಪಸ್ಗಳಲ್ಲಿನ ಹಿಂಸಾಚಾರ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ನವದೆಹಲಿಯಲ್ಲಿ ಜ.13ರಂದು ಸೋನಿಯಾ ಗಾಂಧಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಈ ಸಭೆಗೆ ಲೆಫ್ಟ್ ಫ್ರಂಟ್ ಸೇರಿ ಎಲ್ಲ ಪ್ರತಿಪಕ್ಷಗಳನ್ನೂ ಆಹ್ವಾನಿಸಿದ್ದಾರೆ. ಸಿಪಿಐ (ಎಂ) ಮುಖ್ಯಸ್ಥ ಸೀತಾರಾಮ್ ಯೆಚೂರಿ ಸಭೆಯ ನೇತೃತ್ವ ವಹಿಸಲಿದ್ದಾರೆ.
ಆದರೆ ಈ ಸಭೆಯನ್ನು ಬಹಿಷ್ಕರಿಸುವುದಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಬಂದ್ ವೇಳೆ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯಲು ಕಾಂಗ್ರೆಸ್ ಹಾಗೂ ಲೆಫ್ಟ್ ಫ್ರಂಟ್ಗಳೇ ಕಾರಣ. ನಾನೆಂದೂ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ. ಇದೇ ಕಾರಣಕ್ಕೆ ಸೋನಿಯಾ ಗಾಂಧಿಯವರು ಕರೆದಿರುವ ಸಭೆಯನ್ನೂ ಬಹಿಷ್ಕರಿಸುತ್ತಿದ್ದೇನೆ ಎಂದು ದೀದಿ ತಿಳಿಸಿದ್ದಾರೆ.
24 ಗಂಟೆಗಳ ಭಾರತ್ ಬಂದ್ ವೇಳೆ ಪಶ್ಚಿಮಬಂಗಾಳದಲ್ಲಿ ಬಸ್ಗಳು ಧ್ವಂಸವಾಗಿದ್ದವು. ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ರೈಲ್ವೆ ಹಳಿಗಳನ್ನೂ ಬ್ಲಾಕ್ ಮಾಡಲಾಗಿತ್ತು. ಇದಕ್ಕೆಲ್ಲ ಕಾಂಗ್ರೆಸ್ ಕಾರಣ ಎಂದು ದೀದಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಹಾಗೂ ಲೆಫ್ಟ್ ಫ್ರಂಟ್ ಪಕ್ಷಗಳದ್ದು ದ್ವಂದ್ವ ನಿಲುವು. ಇದನ್ನು ನಾವು ಸಹಿಸುವುದಿಲ್ಲ ಎಂದು ಇಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜೆಎನ್ಯು ಸೇರಿ ದೇಶದ ಇನ್ನೂ ಹಲವು ವಿಶ್ವವಿದ್ಯಾಲಯಗಳ ಕ್ಯಾಂಪಸ್ನಲ್ಲಿ ಹಿಂಸಾಚಾರ ನಡೆದಿತ್ತು.ಇದಕ್ಕೆಲ್ಲ ಕೇಂದ್ರ ಸರ್ಕಾರವೇ ಕಾರಣ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ. (ಏಜೆನ್ಸೀಸ್)