ಪುತ್ತೂರು: ನಗರದ ಹೊರವಲಯದ ಪಡೀಲು ನಿವಾಸಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ವೇಯ್ಟ್ ಲಿಫ್ಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಂದ್ರ ಪ್ರಸಾದ್(42) ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.
ಮೂಲತಃ ಕೆಮ್ಮಿಂಜೆ ನಿವಾಸಿಯಾಗಿರುವ ಅವರು ಪ್ರಸ್ತುತ ಪಡೀಲಿನಲ್ಲಿ ವಾಸವಿದ್ದರು. ಸೋಮವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೂ ಕಾರು ಚಲಾಯಿಸಿಕೊಂಡು ಪುತ್ರಿಯನ್ನು ಶಾಲೆಗೆ ಬಿಟ್ಟು, ಬಳಿಕ ಚಿಕಿತ್ಸೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ಇಸಿಜಿ ತೆಗೆಯುವ ಮೊದಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ರಾಜೇಂದ್ರ ಪ್ರಸಾದ್ ಈ ಹಿಂದೆ ಉಜಿರೆ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವೇಯ್ಟ್ ಲಿಫ್ಟಿಂಗ್ ಮುಖ್ಯ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿಯೂ ಕೆಲವು ವರ್ಷಗಳ ಕಾಲ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದರು.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ರಾಜೇಂದ್ರ ಪ್ರಸಾದ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ವೇಯ್ಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ಗುರುರಾಜ್ ಪೂಜಾರಿ ಗುರು: ಏಕಲವ್ಯ ಪ್ರಶಸ್ತಿ ಪುರಸ್ಕಾರ, ಇಂಗ್ಲೆಂಡಿನ ಬರ್ಮಿಂಗ್ ಹ್ಯಾಂನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ, 2018ರಲ್ಲಿ ಬೆಳ್ಳಿ ಪದಕ ಪಡೆದಿರುವ ಗುರುರಾಜ್ ಪೂಜಾರಿ ಅವರು ರಾಜೇಂದ್ರ ಪ್ರಸಾದ್ ಶಿಷ್ಯರಾಗಿದ್ದರು. ಗುರುರಾಜ್ ಅವರು ಪ್ರತಿ ಸಂದರ್ಭದಲ್ಲೂ ರಾಜೇಂದ್ರ ಪ್ರಸಾದ್ ಅವರನ್ನು ಸ್ಮರಿಸುತ್ತಿದ್ದರು. ಹಲವಾರು ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದ ರಾಜೇಂದ್ರ ಪ್ರಸಾದ್ ಉತ್ತಮ ಕೋಚ್ ಎಂದು ಸಾರ್ವಜನಿಕ ವಲಯದಲ್ಲಿ ಹೆಸರು ಗಳಿಸಿದ್ದರು.
ಮೃತರು ತಂದೆ ರಾಮಕೃಷ್ಣ, ತಾಯಿ ಇಂದಿರಾವತಿ, ಪತ್ನಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಗುಮಾಸ್ತೆ ಪ್ರತಿಮಾ, ಪುತ್ರಿಯರಾದ 5ನೇ ತರಗತಿ ವಿದ್ಯಾರ್ಥಿನಿ ಸಮನ್ವಿ, ಎಲ್ಕೆಜಿ ವಿದ್ಯಾರ್ಥಿನಿ ಮಾನ್ವಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.