ಬೆಳಗಾವಿ: ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿ ಪ್ರಕಾರ ಬೆಳಗಾವಿಯ ಭೂತರಾಮನಹಟ್ಟಿ ರಾಣಿ ಚನ್ನಮ್ಮ ಮೃಗಾಲಯ ಸಿದ್ಧವಾಗಿದ್ದು, ಮುಂದಿನ ವಾರವೇ ಹುಲಿ ಕಳುಹಿಸಲಾಗುತ್ತಿದೆ ಎಂದು ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವಸ್ವಾಮಿ ತಿಳಿಸಿದರು.
ಬೆಳಗಾವಿಯ ಭೂತರಾಮನಹಟ್ಟಿ ರಾಣಿ ಚನ್ನಮ್ಮ ಮೃಗಾಲಯಕ್ಕೆ ಬುಧವಾರ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಈಗಾಗಲೇ ಮೃಗಾಲಯಕ್ಕೆ ಮೂರು ಸಿಂಹಗಳನ್ನು ಕಳುಹಿಸಿಕೊಡಲಾಗಿದೆ. ಅವುಗಳನ್ನು 21 ದಿನ ಕಾರಂಟೈನ್ನಲ್ಲಿ ಇಡಲಾಗಿದ್ದು, ಶೀಘ್ರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ಜಿಲ್ಲೆಯ ಶಾಸಕರು ಮುತುವರ್ಜಿ ವಹಿಸಿ ಹೆಚ್ಚಿನ ಅನುದಾನ ನೀಡಬೇಕು. ಜತೆಗೆ ಬೆಳಗಾವಿಗರು ಮತ್ತು ಸುತ್ತಲಿನ ಜಿಲ್ಲೆಗಳ ಪ್ರಾಣಿಪ್ರಿಯರು ಪ್ರಾಣಿಗಳನ್ನು ದತ್ತು ಪಡೆದರೆ ಮೃಗಾಲಯದ ಸಮಗ್ರ ಅಭಿವೃದ್ಧಿ ಆಗತ್ತದೆ. ಮುಂದಿನ ವಾರ ಪ್ರಾಧಿಕಾರದ ರಾಜ್ಯಮಟ್ಟದ ಸಭೆಯಲ್ಲಿ ಚರ್ಚಿಸಿ ಭೂತರಾಮನಹಟ್ಟಿ ಝೂದಲ್ಲಿನ ನೀರಿನ ಕೊರತೆ ನೀಗಿಸಲು ಅನುದಾನ ಬಿಡುಗಡೆ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಸರ್ಕಾರಿ ಶಾಲೆಗಳಿಗೆ ಉಚಿತ, ಖಾಸಗಿ ಶಾಲೆಯವರಿಗೆ ಶೇ. 20 ರಿಯಾಯಿತಿ ಯೊಂದಿಗೆ ಮೃಗಾಲಯದಲ್ಲಿ ಪ್ರವೇಶ ನೀಡಿ ಪ್ರಾಣಿ ವೈವಿಧ್ಯ ಕುರಿತು ಪಾಠ ಮಾಡುವ ಅವಕಾಶ ಮಾಡಿಕೊಡುವ ಚಿಂತನೆ ಇದೆ. 25 ಸಾವಿರ ರೂ.ಮೇಲ್ಪಟ್ಟು ಹಣ ಕೊಟ್ಟು ಪ್ರಾಣಿ ದತ್ತು ಪಡೆದವರಿಗೆ ಕರ್ನಾಟಕದ 9 ಮೃಗಾಲಯಗಳಲ್ಲಿ 10 ಬಾರಿ ಉಚಿತ ಪ್ರವೇಶ ಸೌಲಭ್ಯ ಕೊಡುವ ವಿಚಾರ ಇದೆ. ಅಲ್ಲದೆ, ಬೆಳಗಾವಿ ಭೂತರಾಮನಹಟ್ಟಿ ಝೂ ಅಭಿವೃದ್ಧಿಗೆ ರಾಜ್ಯ ಮೃಗಾಲಯ ಪ್ರಾಧಿಕಾರ ಹೆಚ್ಚಿನ ಉತ್ಸುಕತೆ ಹೊಂದಿದ್ದು, ದಯಾಳು ದಾನಿಗಳು ಆರ್ಥಿಕ ಸಹಾಯಕ್ಕೆ ಮುಂದೆ ಬರಬೇಕು ಎಂದು ಕರೆ ನೀಡಿದರು.
ಡಿಸಿಎಫ್ ಮತ್ತು ಝೂ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಿ. ಅಮರನಾಥ, ಎಸ್.ಸಿ.ಅಶೋಕ, ಎಸಿಎಫ್ ಮಲ್ಲಿನಾಥ ಕುಸನಾಳ ಇತರರು ಇದ್ದರು.