ಅವಿನ್ ಶೆಟ್ಟಿ ಉಡುಪಿ
ವಿಶ್ವದೆಲ್ಲೆಡೆ ಮಧುಮೇಹ ರೋಗಿಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದಂತೆ, ಭಾರತದಲ್ಲಿ ಮಕ್ಕಳಲ್ಲಿ ಟೈಪ್ ಒನ್ ಡಯಾಬಿಟಿಸ್ ಪ್ರಮಾಣ ಹೆಚ್ಚುತ್ತಿದೆ. ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ.68ರಷ್ಟು ನಗರವಾಸಿ ಮಕ್ಕಳು ಡಯಾಬಿಟಿಸ್ಗೆ ತುತ್ತಾಗುತ್ತಿದ್ದಾರೆ. ದೇಹದಲ್ಲಿ ಗ್ಲುಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆ ದೋಷಗಳಿಂದ ಉಂಟಾಗುವ ಮಧುಮೇಹ ಕಾಯಿಲೆಗೆ ಮಕ್ಕಳು ಹಿಂಸೆ ಪಡುವಂತಾಗಿದೆ. ಶೇ.10 ಪ್ರಕರಣಗಳು ಅನುವಂಶೀಯವಾದುವು. ಉಳಿದಂತೆ ಅನಾರೋಗ್ಯಕರ ಜೀವನ ಶೈಲಿ, ಜಂಕ್ ಫುಡ್ ಸೇವನೆ ಪರಿಣಾಮ ಮಕ್ಕಳಲ್ಲಿ ಮಧುಮೇಹ ಕಾಡಲು ಕಾರಣ ಎನ್ನುವುದು ವೈದ್ಯಕೀಯ ವಲಯದ ಚಿಂತೆಗೆ ಕಾರಣವಾಗಿದೆ.
ಟೈಪ್ ಒನ್ ಡಯಾಬಿಟಿಸ್ ಸಾಮಾನ್ಯವಾಗಿ 1ರಿಂದ 30 ವರ್ಷ ವಯಸ್ಸಿನವರೆಗೂ ಕಂಡುಬರುತ್ತದೆ. ಕುಟುಂಬಗಳೂ ಆರೋಗ್ಯಕಾರಿ ಜೀವನಶೈಲಿ ಪಾಲಿಸಬೇಕು. ಮಕ್ಕಳೂ ವಿಡಿಯೋ ಗೇಮ್ಸ್ ಟಿವಿ, ಮೊಬೈಲ್ ಹೊರತಾಗಿ ಕ್ರೀಡೆ, ದೈಹಿಕ ಶ್ರಮದ ಚಟುವಟಿಕೆಗಳಲ್ಲಿ ತೊಡಗಿಸಿಕೊಳಬೇಕು. ಡಯಾಬಿಟಿಸ್ ಇರುವ ಮಕ್ಕಳ ಪಾಲಕರು ಈ ವಿಚಾರದಲ್ಲಿ ಆತಂಕ ಪಡದೆ ಧೈರ್ಯದಿಂದ ಮಕ್ಕಳ ಆರೋಗ್ಯ ಬಗ್ಗೆ ಗಮನ ಕೊಡಬೇಕು. ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಚಿಕಿತ್ಸೆ, ಅದಕ್ಕೆ ಅನುಸಾರವಾಗಿ ಉತ್ತಮ ಆಹಾರ ಸೇವನೆ ಕ್ರಮಗಳನ್ನು ಪಾಲಿಸುವ ಮೂಲಕ ಆರೋಗ್ಯಯುತ ಜೀವನ ನಡೆಸಬಹುದು.
– ಡಾ.ಸಹನಾ ಶೆಟ್ಟಿ, ಎಂಡೊಕ್ರೈನಾಲಜಿ ವಿಭಾಗದ ಮುಖ್ಯಸ್ಥೆ, ಮಣಿಪಾಲ ಕೆಎಂಸಿ ಆಸ್ಪತ್ರೆ
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣಗಳನ್ನು ವಿಶ್ಲೇಷಿಸಿದಾಗ ಉಡುಪಿ, ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ನಗರವಾಸಿ ಮಕ್ಕಳಲ್ಲಿ ಟೈಪ್ ಒನ್ ಡಯಾಬಿಟಿಸ್ ಪ್ರಮಾಣ ಏರಿಕೆಯಾಗುತ್ತಿದೆ. ಮಕ್ಕಳ ಡಯಾಬಿಟಿಸ್ ಸಂಬಂಧಿಸಿ ಈವರೆಗೆ ಆರೋಗ್ಯ ಇಲಾಖೆ ಪ್ರತ್ಯೇಕವಾಗಿ ನಿಖರ ಅಂಕಿ ಅಂಶವನ್ನು ಸಂಗ್ರಹಿಸಿಲ್ಲ. ಅದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ವಿಶೇಷ ಅಸ್ಥೆ ವಹಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಆರೊಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಂಕಾಗುವ ಮಕ್ಕಳು
ಡಯಾಬಿಟಿಸ್ ಟೈಪ್ ಒನ್ಗೆ ತುತ್ತಾಗುವ ಮಕ್ಕಳು 15ರಿಂದ 30 ದಿನದೊಳಗೆ ಮಂಕಾಗುತ್ತಾರೆ. ರಾತ್ರಿ ನಿದ್ದೆಯಲ್ಲಿ ಮೂತ್ರ ಮಾಡುತ್ತಾರೆ. ಹಸಿವಾಗುತ್ತದೆ, ಆದರೆ ಸರಿಯಾಗಿ ತಿನ್ನುವುದಿಲ್ಲ. ತೀರಾ ಹಠ ಮಾಡುತ್ತಾರೆ. ಕೆಲವೇ ದಿನಗಳಲ್ಲಿ ತೂಕ ವಿಪರೀತ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಊಟ, ಆಟ, ಇತರೆ ಚಟುವಟಿಕೆಗಳಲ್ಲಿ ನಿರಾಸಕ್ತಿ, ವಿಪರೀತ ಸುಸ್ತು, ಬಾಯಾರಿಕೆ ಇದರ ಲಕ್ಷಣಗಳು. ಪೋಷಕರು ಇದನ್ನು ನಿರ್ಲಕ್ಷ್ಯ ಮಾಡದೆ ಕೂಡಲೆ ವೈದ್ಯರನ್ನು ಸಂರ್ಪಸಿ ಪರೀಕ್ಷೆ ನಡೆಸಬೇಕು ಎಂದು ಸಲಹೆ ನೀಡುತ್ತಾರೆ ಮಣಿಪಾಲ ಕೆಎಂಸಿ ಆಸ್ಪತ್ರೆ ತಜ್ಞ ವೈದ್ಯೆ ಡಾ.ಸಹನಾ ಶೆಟ್ಟಿ.
ಆಯುರ್ವೇದದಿಂದ ನಿಯಂತ್ರಣ ಸಾಧ್ಯವೇ?
ಆಯುರ್ವೇದ ಔಷಧ ಪದ್ಧತಿಯಲ್ಲಿ ಇದನ್ನು ಸಹಜ ಮಧುಮೇಹ ಎಂದು ಪರಿಗಣಿಸಿದ್ದು, ಇದರ ನಿಯಂತ್ರಣಕ್ಕೆ ಔಷಧ ಆಯುರ್ವೇದದಲ್ಲಿದೆ ಎನ್ನುತ್ತಾರೆ ಉದ್ಯಾವರ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ಆಚಾರ್ಯ.
ಮಕ್ಕಳ ಮಧುಮೇಹ ಚಿಕಿತ್ಸೆಯಲ್ಲಿ ಅಲೋಪಥಿ ಇನ್ಸುಲಿನ್ ಜತೆಗೆ ಆಯುರ್ವೇದ ಔಷಧ ಮುಂದುವರಿಸಲಾಗುತ್ತದೆ. ಕೆಲವರು ಆಯುರ್ವೇದ ಔಷಧವನ್ನು ಅರ್ಧದಲ್ಲಿಯೇ ನಿಲ್ಲಿಸುತ್ತಾರೆ. ಡಯಾಬಿಟಿಸ್ ಸಂಬಂಧಿಸಿ ಇತರೆ ಅಡ್ಡಪರಿಣಾಮ ಬಾರದಂತೆ ಮುಂದೂಡಲು ಬಂದರೂ ಅದನ್ನು ನಿಯಂತ್ರಿಸಲು ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿ.
– ಡಾ.ಶ್ರೀನಿವಾಸ್ ಆಚಾರ್ಯ, ಪ್ರಾಂಶುಪಾಲ, ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು, ಉದ್ಯಾವರ
ಮಕ್ಕಳ ಡಯಾಬಿಟಿಸ್ಗೆ ಸಂಬಂಧಿಸಿ ಸದ್ಯಕ್ಕೆ ಅಲೋಪಥಿ ಇನ್ಸುಲಿನ್ ಮದ್ದಾಗಿದ್ದು, ಅದನ್ನು ಮುಂದುವರಿಸುವ ಜತೆಗೆ ಮಗುವಿಗೆ ಮುಂದಿನ 15-20 ವರ್ಷಗಳ ನಂತರ ಯಾವುದೇ ರೀತಿಯ ಡಯಾಬಿಟಿಸ್ನ ಅಡ್ಡಪರಿಣಾಮಗಳು ಉಂಟಾಗದಂತೆ ತಡೆಗಟ್ಟಲು ಆಯುರ್ವೇದ ಔಷಧಗಳನ್ನು ಸಹಕಾರಿಯಾಗಿ ನೀಡಲಾಗುತ್ತದೆ. ಕೆಲವು ಮಕ್ಕಳಲ್ಲಿ ಮೇದೋಜೀರಕ ಗ್ರಂಥಿಯಲ್ಲಿರುವ ಸಕ್ಕರೆಯನ್ನು ಜೀರ್ಣವಾಗಿಸುವ ಕೋಶಗಳು (ಬೀಟಾ ಸೆಲ್ಸ್) ಪೂರ್ಣ ಪ್ರಮಾಣದಲ್ಲಿ ಡೆಡ್ ಆಗದೆ ಅರ್ಧದಷ್ಟು ಕಾರ್ಯನಿರ್ವಹಿಸುತ್ತಿದ್ದಲ್ಲಿ ಮೂರು ತಿಂಗಳ ಅವಧಿಯಲ್ಲಿ ಗುಣಪಡಿಸುವ ಸಾಧ್ಯತೆ ಇದೆ. ಆದರೆ ಇದರ ಸಾಧ್ಯತೆ ತೀರಾ ಕಡಿಮೆಯಾಗಿದ್ದು, 15ರಿಂದ 20 ದಿನಗಲ್ಲಿ ಕೋಶಗಳ ಕಾರ್ಯನಿರ್ವಹಣೆ ಸ್ಥಗಿತವಾಗಿರುತ್ತದೆ.
ಕರ್ನಾಟಕದ ಪಾಲು ಹೆಚ್ಚು
ಇಂಡಿಯನ್ ಜರ್ನಲ್ ಆಫ್ ಎಂಡೋಕ್ರೈನಾಲಜಿ ಆಂಡ್ ಮೆಟೊಬಾಲಿಸಂ ಸಮೀಕ್ಷೆ ವರದಿ ದೇಶದಲ್ಲಿ ಪ್ರತಿವರ್ಷ ಟೈಪ್ ಒನ್ ಡಯಾಬಿಟಿಸ್ ಶೇ.3ರಿಂದ ಶೇ.5 ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಇದರಲ್ಲಿ ಕರ್ನಾಟಕದ ಪಾಲು ಅಧಿಕ. ಪ್ರತಿ 1 ಲಕ್ಷ ಮಕ್ಕಳಲ್ಲಿ ಶೇ.17.93 ಪ್ರಮಾಣ ಕರ್ನಾಟಕವಾದರೆ, ನಂತರ ಸ್ಥಾನದಲ್ಲಿ ಹರಿಯಾಣ 10.12, ಚೆನ್ನೈ ಶೇ.3.2ರಷ್ಟಿದೆ ಎನ್ನುತ್ತದೆ ಅಧ್ಯಯನ ವರದಿ. ಜಾಗತಿಕ ವರದಿ ಅನುಸಾರ ಪ್ರತಿವರ್ಷ ಸರಾಸರಿ 80 ಸಾವಿರ ಮಕ್ಕಳು ಟೈಪ್ ಒನ್ ಡಯಾಬಿಟಿಸ್ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಈವರೆಗೆ 97,700 ಮಕ್ಕಳು ಟೈಪ್ ಒನ್ ಡಯಾಬಿಟಿಸ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.