ದುಬೈ: ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ನಾಕೌಟ್ ಹಂತಕ್ಕೇರಲು ವಿಫಲವಾಗಿದ್ದಕ್ಕೆ ಕ್ರಿಕೆಟ್ ಪಂಡಿತರು ವಿವಿಧ ಕಾರಣಗಳನ್ನು ವಿವರಿಸುತ್ತಿದ್ದಾರೆ. ಆದರೆ ದಿಗ್ಗಜ ಬ್ಯಾಟರ್ ಹಾಗೂ ವೀಕ್ಷಕವಿವರಣೆಕಾರ ಸುನೀಲ್ ಗಾವಸ್ಕರ್ ಪ್ರಕಾರ, ಭಾರತ ತಂಡ ವೈಫಲ್ಯಕ್ಕೆ ಇರುವುದು ಒಂದೇ ಕಾರಣ. ಅದೇನೆಂದರೆ, ಭಾರತೀಯ ಬ್ಯಾಟರ್ಗಳು ಸಾಕಷ್ಟು ರನ್ ಗಳಿಸದೆ ಇರುವುದಾಗಿದೆ.
‘ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಬೌಲರ್ಗಳನ್ನು ನಮ್ಮ ಬ್ಯಾಟರ್ಗಳ ಮೇಲೆ ಕಡಿವಾಣ ಹೇರಿದರು. ಅವರು ಸರಾಗವಾಗಿ ರನ್ ಗಳಿಸಲು ಅವಕಾಶ ನೀಡಲಿಲ್ಲ. ಇದೇ ಭಾರತ ತಂಡ ನಾಕೌಟ್ ಹಂತಕ್ಕೇರಲು ಸಾಧ್ಯವಾಗದೆ ಇರುವುದಕ್ಕೆ ಪ್ರಮುಖ ಕಾರಣವಾಗಿದೆ. 2ನೇ ಇನಿಂಗ್ಸ್ನಲ್ಲಿ ಇಬ್ಬನಿಯಿಂದಾಗಿ ಬ್ಯಾಟಿಂಗ್ ಸುಲಭವಾಗಿತ್ತು. ಯಾಕೆಂದರೆ ಚೆಂಡು ತಿರುವು ಪಡೆಯುತ್ತಿರಲಿಲ್ಲ. ಸ್ಪಿನ್ನರ್ಗಳ ಎಸೆತ ನೇರವಾಗಿ ಹೋಗುತ್ತಿತ್ತು’ ಎಂದು ಗಾವಸ್ಕರ್ ವಿವರಿಸಿದ್ದಾರೆ.
‘2ನೇ ಸರದಿಯಲ್ಲಿ ಬ್ಯಾಟಿಂಗ್ ಮಾಡುವುದು ಲಾಭದಾಯಕವಾಗಿತ್ತು. ಆದರೂ ಮೊದಲ ಸರದಿಯಲ್ಲಿ ಬ್ಯಾಟಿಂಗ್ ಮಾಡುವಾಗ 180 ಪ್ಲಸ್ ರನ್ ಗಳಿಸಿದ್ದರೆ, ಬೌಲರ್ಗಳಿಗೆ ಮೊತ್ತ ರಕ್ಷಿಸಿಕೊಳ್ಳಲು 20-30 ರನ್ಗಳು ಹೆಚ್ಚುವರಿ ಆಗುತ್ತಿದ್ದವು. ನ್ಯೂಜಿಲೆಂಡ್ ವಿರುದ್ಧ ಕೇವಲ 111 ರನ್ ಗಳಿಸಿದ್ದರಿಂದ ಅಲ್ಲಿ ಇಬ್ಬನಿಯನ್ನು ದೂರುವುದು ಸರಿಯಲ್ಲ. ನಾವು ಸಾಕಷ್ಟು ರನ್ ಗಳಿಸಲಿಲ್ಲ. ಅದೊಂದೇ ಸೋಲಿಗೆ ಕಾರಣ. ಬೇರೇನೂ ಇಲ್ಲ’ ಎಂದು ಗಾವಸ್ಕರ್ ಹೇಳಿದ್ದಾರೆ.
ಭಾರತ ತಂಡದ ವೈಫಲ್ಯದ ಹೊರತಾಗಿಯೂ ಮುಂದಿನ ದಿನಗಳಲ್ಲಿ ತಂಡದಲ್ಲಿ ಸಮಗ್ರ ಬದಲಾವಣೆಯ ಅಗತ್ಯವಿಲ್ಲ ಎಂದಿರುವ ಗಾವಸ್ಕರ್, ಸಮಗ್ರ ಬದಲಾವಣೆಯಿಂದ ಯಾವುದೇ ವ್ಯತ್ಯಾಸವೂ ಆಗುವುದಿಲ್ಲ. ಆಟಗಾರರ ಮನೋಭಾವವಷ್ಟೇ ಬದಲಾಗಬೇಕಾಗಿದೆ. ಪವರ್ಪ್ಲೇಯ ಲಾಭವೆತ್ತಬೇಕು. ಕಳೆದ ಕೆಲ ಟೂರ್ನಿಗಳಿಂದ ಭಾರತ ತಂಡ ಅದನ್ನು ಮಾಡುತ್ತಿಲ್ಲ. ಬಲಿಷ್ಠ ಎದುರಾಳಿಗಳ ವಿರುದ್ಧ ಆಡುವಾಗ ಭಾರತ ತಂಡ ಅವರ ಬೌಲರ್ಗಳೆದುರು ಹೆಚ್ಚಿನ ರನ್ ಗಳಿಸುತ್ತಿಲ್ಲ. ಇದನ್ನು ಬದಲಾಯಿಸಬೇಕಾಗಿದೆ ಎಂದಿದ್ದಾರೆ.
ಭಾರತ ತಂಡದ ಫೀಲ್ಡಿಂಗ್ ಕೂಡ ಸುಧಾರಣೆ ಕಾಣಬೇಕಾಗಿದೆ ಎಂದಿರುವ ಗಾವಸ್ಕರ್, ‘ಉತ್ತಮ ಫೀಲ್ಡರ್ಗಳನ್ನೂ ತಂಡಕ್ಕೆ ಆರಿಸಬೇಕಿದೆ. ನ್ಯೂಜಿಲೆಂಡ್ ತಂಡದ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು. ಫೀಲ್ಡರ್ಗಳು ಸಾಕಷ್ಟು ರನ್ ರಕ್ಷಿಸಿದರು, ಉತ್ತಮ ಕ್ಯಾಚ್ ಹಿಡಿದರು. ಬೌಲಿಂಗ್ ದಾಳಿ ಸಾಧಾರಣವಾಗಿದ್ದು, ಪಿಚ್ ಕೂಡ ನಿರ್ಜೀವವಾಗಿದ್ದರೆ ಆಗ ಉತ್ತಮ ಫೀಲ್ಡಿಂಗ್ನಿಂದ ವ್ಯತ್ಯಾಸ ತರಬಹುದಾಗಿದೆ. ಆದರೆ ಹಾಲಿ ತಂಡದಲ್ಲಿ 3-4 ಮಾತ್ರ ಅತ್ಯುತ್ತಮ ಫೀಲ್ಡರ್ಗಳಿದ್ದಾರೆ. ಉಳಿದವರು ಹೆಚ್ಚಿನ ರನ್ ಉಳಿಸುತ್ತಾರೆ ಅಥವಾ ಬೌಂಡರಿ ಗೆರೆ ಬಳಿ ಡೈವ್ ಹೊಡೆಯುತ್ತಾರೆ ಎಂದು ಹೇಳಲಾಗದು’ ಎಂದಿದ್ದಾರೆ.
ಐಪಿಎಲ್ಗಿಂತ ದೇಶಕ್ಕೆ ಆದ್ಯತೆ ನೀಡಿ, ಭಾರತೀಯ ಕ್ರಿಕೆಟಿಗರಿಗೆ ಕಪಿಲ್ ದೇವ್ ಕಿವಿಮಾತು