ಕಾರವಾರ: ಜಿಲ್ಲೆಯಲ್ಲಿ ಸೆಕೆಯ ಜತೆ ಜೀವಜಲ ದ ಅಭಾವವೂ ಪ್ರಾರಂಭವಾಗಿದೆ.
ಈ ಬಾರಿ ಮುಂಗಾರಿನ ನಂತರ ಮಳೆಯಾಗದ ಕಾರಣ ಅಂತರ್ಜಲ ಕುಸಿದಿದೆ.
ಇದರಿಂದ ಕರಾವಳಿಯ ಕೆಲ ಭಾಗದಲ್ಲಿ ತೆರೆದ ಬಾವಿಗಳ ನೀರು ಉಪ್ಪಾಗಿದ್ದರೆ, ಇನ್ನೂ ಕೆಲವು ಗ್ರಾಮಗಳ ಬಾವಿಗಳಲ್ಲಿ ನೀರು ಸಿಗದಂತಾಗಿದೆ.
ಕಾರವಾರ, ಅಂಕೋಲಾ ನಗರ, ವಿವಿಧ ಗ್ರಾಮಗಳಿಗೆ ನೀರು ಪೂರೈಸುವ ಗಂಗಾವಳಿ ಮತ್ತು ಕುಮಟಾ, ಹೊನ್ನಾವರಕ್ಕೆ ನೀರು ಪೂರೈಸುವ ಅಘನಾಶಿನಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಶಿರಸಿ ನಗರಕ್ಕೆ ನೀರು ಪೂರೈಸುವ ಕೆಂಗ್ರೆ ಹೊಳೆ ಹರಿವು ನಿಲ್ಲಿಸಿದೆ.
ಭಟ್ಕಳದಲ್ಲಿ ಕಡವಿನಕಟ್ಟಾ ಡ್ಯಾಂನಲ್ಲಿ ನೀರು ಕಡಿಮೆಯಾಗಿದೆ. ಸದ್ಯಕ್ಕೆ ಎಲ್ಲ ನಗರಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗದಿದ್ದರೂ ಇದೇ ವಾತಾವರಣ ಮುಂದುವರಿದಲ್ಲಿ ಈ ಮಾಸಾಂತ್ಯ ಹಾಗೂ ಮೇ ತಿಂಗಳಲ್ಲಿ ಎಲ್ಲೆಡೆ ನೀರಿನ ಅಭಾವವಾಗುವ ಲಕ್ಷಣ ಕಾಣುತ್ತಿದೆ.
ಜೀವಜಲ ಅಭಾವ
ಕಳೆದ ಬಾರಿ ಜಿಲ್ಲೆಯ 111 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು.
ಈ ಬಾರಿ ಜಿಲ್ಲೆಯ 101 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಜಿಲ್ಲಾ ಟಾಸ್ಕ್ ೆರ್ಸ್ ಅಂದಾಜಿಸಿದೆ.
ಕಾರವಾರ ಕಾಳಿ ನದಿಯ ಬಲ ದಂಡೆಯಲ್ಲಿರುವ ಹಣಕೋಣ, ಕದ್ರಾ, ಗೋಟೆಗಾಳಿ, ಅಸ್ನೋಟಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಅಸ್ನೋಟಿ ಗ್ರಾಪಂನಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.
ಕದ್ರಾ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಗ್ರಾಮಸ್ಥರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಹಳಿಯಾಳದ ಮಂಗಳವಾಡ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಉಂಟಾದ ಬಗ್ಗೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದು, ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಆಡಳಿತದ ಉಪಕ್ರಮವೇನು..?
ಜಿಲ್ಲೆಯ ಯಾವುದೇ ತಾಲೂಕನ್ನು ಸರ್ಕಾರ ಇದುವರೆಗೂ ಬರ ಪೀಡಿತ ಎಂದು ೋಷಿಸಿಲ್ಲ.
ಇದರಿಂದ ನೀರು ಪೂರೈಕೆಗೆ ಯಾವುದೇ ವಿಶೇಷ ಅನುದಾನ ಬಾರದು.
ಸ್ಥಳೀಯ ಅನುದಾನ ಹೊಂದಿಸಿಕೊಂಡು ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ.
ತಾಪಂ ಹಾಗೂ ಎಲ್ಲ ಗ್ರಾಪಂಗಳ 15ನೇ ಹಣಕಾಸು ಅನುದಾನವನ್ನು ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ ಎಂದು ಜಿಪಂ ಸಿಇಒ ಈಶ್ವರ ಕಾಂದೂ ತಿಳಿಸಿದ್ದಾರೆ.
ಅಗತ್ಯ ಕ್ರಮಕ್ಕೆ ಸೂಚನೆ
- ತೀರ ಅಗತ್ಯವಿದ್ದಲ್ಲಿ ಬೋರ್ವೆಲ್ಗಳನ್ನು ಅಳವಡಿಸಬೇಕು.
- ಪೈಪ್ಲೈನ್ ಇದ್ದು, ನೀರು ಸಿಗುತ್ತಿಲ್ಲ ಎಂದಾದರೆ ಪೈಪ್ಲೈನ್ ದುರಸ್ತಿಗೆ ಕ್ರಮ ವಹಿಸಬೇಕು.
- ಇದ್ಯಾವುದೂ ಆಗದೇ ಇದ್ದಲ್ಲಿ ಅಂತಿಮವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು.
ಜಿವಜಲ ಎಲ್ಲೆಲ್ಲಿ ಅಭಾವ ?
- ಅಂಕೋಲಾ-13
- ಭಟ್ಕಳ-11
- ಹಳಿಯಾಳ-8
- ಹೊನ್ನಾವರ-19
- ಕಾರವಾರ-10
- ಕುಮಟಾ-12
- ಮುಂಡಗೋಡ-10
- ಸಿದ್ದಾಪುರ-7
- ಶಿರಸಿ-6
- ಜೊಯಿಡಾ-3
- ಯಲ್ಲಾಪುರದ 2
15ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿಗೆ ಮೀಸಲಿರುವ ಸುಮಾರು 4.9 ಕೋಟಿ ರೂ.ಗಳನ್ನು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬಿಡುಗಡೆ ಮಾಡಲಾಗಿದೆ. ಪ್ರತಿ ತಾಲೂಕಿಗೆ ಕನಿಷ್ಠ 40 ರಿಂದ 50 ಲಕ್ಷ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಅನುದಾನದ ಕೊರತೆ ಇಲ್ಲ. ಅಗತ್ಯವಿದ್ದಲ್ಲಿ ತಾಪಂ ಇಒಗಳ ಅನುಮತಿ ಪಡೆದು ಕ್ರಮ ವಹಿಸಲು ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.
ಈಶ್ವರ ಕಾಂದೂ, ಜಿಪಂ ಸಿಇಒ