ಸೊರಬ: ಏಷ್ಯಾದಲ್ಲೇ ಅತಿ ಹೆಚ್ಚು ಕೆರೆಗಳು ಇರುವ ಸೊರಬ ತಾಲೂಕಿನಲ್ಲಿ ಈಗ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಇಲ್ಲಿ ಬರೋಬ್ಬರಿ 1053 ಕೆರೆಗಳಿವೆ. ಆದರೆ ಹನಿ ನೀರಿಗೂ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಇಲ್ಲಿ ಬರದ ಛಾಯೆ ದಿನೇದಿನೆ ಹೆಚ್ಚಾಗುತ್ತಿದೆ. ಹಲವು ಗ್ರಾಮಗಳಲ್ಲಿ ಕೊಳವೆ ಬಾವಿಗಳು ಬತ್ತಿಹೋಗಿದ್ದರೆ, ಇನ್ನೂ ಕೆಲವೆಡೆ ನೀರಿನ ಪ್ರಮಾಣ ಕಡಿಮೆಯಾಗಿದೆ. ಓವರ್ಹೆಡ್ ಟ್ಯಾಂಕರ್ಗಳಿಗೆ ನೀರು ಏರಿಸಲು ಕೂಡಾ ಸಾಧ್ಯವಾಗುತ್ತಿಲ್ಲ.

ತಾಲೂಕಿನ ಭಾರಂಗಿ ಗ್ರಾಮ ಪಂಚಾಯಿತಿಯ ಗಡಿ ಗ್ರಾಮಗಳಾದ ಯಲಿವಾಳ, ಬೆಣ್ಣೆಗೇರಿ, ಗುಡ್ಡದ ಬೆಣ್ಣೆಗೇರಿ, ಹಳ್ಳದ ಬೆಣ್ಣೆಗೇರಿ, ಜೋಗಿಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಹಾಗಾಗಿ ಪರ್ಯಾಯ ವ್ಯವಸ್ಥೆ ಮಾಡುವ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ಗ್ರಾಮಸ್ಥರು ಕೊಡ ಹಿಡಿದು ನಾಮುಂದು, ತಾಮುಂದು ಎಂದು ನೂಕುನುಗ್ಗಲು ಉಂಟಾಗುತ್ತಿದೆ. ಕೆಲವರು ದೂರದ ಪ್ರದೇಶದಿಂದ ಕೈಗಾಡಿಗಳಲ್ಲಿ ಮನೆಗೆ ನೀರು ತರುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಕೇವಲ 15 ದಿನ ಮಾತ್ರ ಮಳೆ ಆಗಿದ್ದರಿಂದ ಆಗಲೇ ಬರ ಮುನ್ಸೂಚನೆ ಸಿಕ್ಕಿತ್ತು. ಈಗ ಬಿಸಿಲಿನ ಬೇಗೆ ಹೆಚ್ಚಾಗಿ ಕೊಳವೆ ಬಾವಿಗಳು ಬತ್ತಿಹೋಗಿವೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಹೆಚ್ಚಾಗುತ್ತಿದೆ. ಯಲಿವಾಳ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು 5 ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಈ ಪೈಕಿ 2 ಬೋರ್ವೆಲ್ಗಳು ನೀರಿಲ್ಲದೆ ಸ್ಥಗಿತವಾಗಿವೆ. ಒಂದರಲ್ಲಿ ಒಂದು ಇಂಚು ನೀರು ಬರುತ್ತಿದ್ದು, ಇನ್ನೆರಡರಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿದೆ. ಇವುಗಳಿಂದ ಓವರ್ ಹೇಡ್ ಟ್ಯಾಂಕ್ಗಳಿಗೆ ನೀರು ಏರಿಸಲು ಆಗುತ್ತಿಲ್ಲ. ಮಧ್ಯದಲ್ಲಿ ಪೈಪ್ ಲೈನ್ ತೆರೆದು ನೀರು ಬಿಡಲಾಗುತ್ತದೆ. ಸೈಕಲ್ ಬಂಡಿಯ ಮೂಲಕ ನೀರು ಹಿಡಿಯಲು ಬೆಳಗಿನಿಂದಲೆ ಸರದಿ ಸಾಲು ನಿಲ್ಲಬೇಕಿದೆ. ಒಂದು ವಾರದಲ್ಲಿ ಕಡಿಮೆ ನೀರು ಇರುವ ಕೊಳವೆಬಾವಿಗಳು ನಿಲ್ಲುವ ಸದ್ಯತೆ ಇದೆ ಎಂದು ಗ್ರಾಮದ ಜನತೆ ಆತಂಕ ಪಡುತ್ತಿದ್ದಾರೆ.
ಬೆಣ್ಣೆಗೇರಿ, ಗುಡ್ಡದ ಬೆಣ್ಣೆಗೇರಿ, ಜೋಗಿಹಳ್ಳಿ ಗ್ರಾಮಗಳ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದರಿಂದ ಮತ್ತಷ್ಟು ಆಳಕ್ಕೆ ಇಳಿಸಲಾಗಿದೆ. ಆದರೂ ನೀರು ಮತ್ತೆ ಕಡಿಮೆಯಾಗುತ್ತಿವೆ. ಈ ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳಿಗೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯಬೇಕು ಇಲ್ಲವೇ, ಬದಲಿ ವ್ಯವಸ್ಥೆ ಮಾಡಬೇಕಿದೆ. ಆದರೆ ಹೊಸದಾಗಿ ಕೊಳವೆ ಬಾವಿ ಕೊರೆಸಲು ಯಾವ ಬೋರ್ವೆಲ್ ಏಜೆನ್ಸಿಗಳು ಲಾರಿಗಳನ್ನು ಕಳುಹಿಸುತ್ತಿಲ್ಲ. ಏಕೆಂದರೆ ಇಲ್ಲಿ ಭೂಮಿಯಲ್ಲಿ ಬಂಡೆಗಳು ಹೆಚ್ಚಾಗಿ ಬರುವುದರಿಂದ ನಷ್ಟ ಉಂಟಾಗುತ್ತದೆ ಎಂದು ಹಿಂದೇಟು ಹಾಕುತ್ತಿದ್ದಾರೆ. ಈ ಸಂಬಂಧ ರೈತರು ಜಿಲ್ಲಾಧಿಕಾರಿಗೆ ದೂರನ್ನು ಸಹ ಸಲ್ಲಿಸಿದ್ದಾರೆ.
ತೋಟಗಳನ್ನು ಉಳಿಸಿಕೊಳ್ಳುವ ಸವಾಲು: ಖಾಸಗಿ ಕೊಳವೆ ಬಾವಿಗಳು ಕೂಡ ಬತ್ತಿಹೋಗಿವೆ. ಕೆಲವೆಡೆ ಅಲ್ಪಸ್ವಲ್ಪ ನೀರಿದ್ದು, ಮೊದಲು ಕೃಷಿ ಹೊಂಡಗಳನ್ನು ತುಂಬಿಸಿಕೊಂಡು ಆನಂತರ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ಟ್ಯಾಂಕರ್ ಮೂಲಕ ಅಡಕೆ ತೋಟಗಳಿಗೆ ವಾರಕೊಮ್ಮೆ ನೀರು ಬಿಡುತ್ತಿದ್ದಾರೆ. ಕೆಲವೆಡೆ ನೀರಿಲ್ಲದೆ ತೋಟಗಳು ಬತ್ತಿಹೋಗಿವೆ. ತೋಟಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ತಾಲೂಕಿನ ಜಡೆ, ಆನವಟ್ಟಿ, ಕಸಬಾ, ಚಂದ್ರಗುತ್ತಿ, ಉಳವಿ ಹೋಬಳಿಗಳಲ್ಲಿ ಕೆರೆಗಳು ಹಾಗೂ ಮಳೆಗಾಲ ಉತ್ತಮವಾಗಿದ್ದರೆ ಸದಾ ಹರಿಯುತ್ತಿದ್ದ ವರದಾ, ದಂಡಾವತಿ ನದಿಗಳು ಬತ್ತಿಹೋಗಿವೆ. ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಿವೆ. ಕೆಲವು ರೈತರು ಕೊಳವೆ ಬಾವಿಗಳ ಸಮೀಪ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಮಳೆ ಬಾರದಿದ್ದರೆ ತಾಲೂಕಿನ ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುವುದು ನಿಶ್ಚಿತ.
ಯಲಿವಾಳ ಗ್ರಾಮದಲ್ಲಿ ಕೆಲವು ಕುಡಿವ ನೀರಿನ ಕೊಳವೆ ಬಾವಿಗಳು ಬತ್ತಿವೆ. ಇರುವ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಮೆಯಾಗಿ ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಕೊಡಲು ಸಾಧ್ಯವಾಗದೆ ಅಲ್ಲಲ್ಲಿ ಪೈಪ್ಲೈನ್ ಮಧ್ಯೆ ತರೆದು ನೀರು ಕೊಡುತ್ತಿದ್ದೇವೆ. ಕೊಳವೆ ಬಾವಿ ಕೊರೆಸಲು ಮೇಲಧಿಕಾರಿಗಳಿಗೆ ಅನುಮತಿ ಕೊರಿದ್ದೇವೆ. ಪರಿಸ್ಥಿತಿಗೆ ಅನುಗುಣವಾಗಿ ಖಾಸಗಿ ಕೊಳವೆ ಬಾವಿಗಳಿಂದ ಟ್ಯಾಂಕರ್ ಮೂಲಕ ನೀರು ಪಡೆಯುತ್ತೇವೆ ಎನ್ನುತ್ತಾರೆ ಭಾರಂಗಿ ಪಿಡಿಒ ಶಿವರಾಜ್.