ಬಾವನಸೌಂದತ್ತಿ: ರಸ್ತೆ ಅಪಘಾತದಲ್ಲಿ ಮಂಗಳವಾರ ಮೃತಪಟ್ಟ ಗ್ರಾಮದ ವೀರಯೋಧ ಅಜಿತ ಬಂಡು ಕೊರವಿ ಅವರ ಅಂತ್ಯ ಸಂಸ್ಕಾರವನ್ನು ತಾಲೂಕು ಆಡಳಿತ ಸಕಲ ಗೌರವದೊಂದಿಗೆ ಬುಧವಾರ ನೆರವೇರಿಸಿತು.
ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ, ಶಾಸಕ ಡಿ.ಎಂ. ಐಹೊಳೆ ಅವರು ಯೋಧನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಭೂಪಾಲ್ನ ಆರ್ಮಿ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಅಜಿತ ಕೊರವಿ, ಇತ್ತೀಚೆಗೆ ರಜೆಗೆಂದು ತನ್ನ ಸ್ವಗ್ರಾಮ ಬಾವನಸೌಂದತ್ತಿಗೆ ಆಗಮಿಸಿದ್ದರು. ಇದೇ ವೇಳೆ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಸೇವೆಗೆ ಹಾಜರಾಗಲು ಆಗದೆ ಗ್ರಾಮದಲ್ಲಿ ಉಳಿದುಕೊಂಡಿದ್ದರು. ಮಂಗಳವಾರ ಬಾವನಸೌಂದತ್ತಿಯಿಂದ ಅಂಕಲಿ ಗ್ರಾಮಕ್ಕೆ ಹೋಗುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಯೋಧನ ಅಂತ್ಯಸಂಸ್ಕಾರದಲ್ಲಿ ಸಿಪಿಐ ಕೆ.ಎಸ್. ಹಟ್ಟಿ, ಪಿಎಸ್ಐ ಗಜಾನನ ನಾಯಿಕ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ, ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು.