ನವದೆಹಲಿ: ತಮ್ಮ ಬದ್ಧವೈರಿ ಸಚಿನ್ ಪೈಲಟ್ ವಿರುದ್ಧದ ಮುಸುಕಿನ ಗುದ್ದಾಟ ಮುಂದುವರೆಸಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಈಗ ಮತ್ತೊಮ್ಮೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಕಾಂಗ್ರೆಸ್ಗೆ ಮಗ್ಗಲ ಮುಳ್ಳಾಗುವ ಸಾಧ್ಯತೆ ಇದೆ.
ನವದೆಹಲಿಯಲ್ಲಿರುವ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, ನಾನು ಸಿಎಂ ಪದವಿಯನ್ನು ತೊರೆಯಲು ಸಿದ್ಧನಿದ್ದೇನೆ. ಆದರೆ, ಆ ಪದವಿ ನನ್ನನ್ನು ಬಿಡಲು ಸಿದ್ದವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿರೋಧಿ ಸಚಿನ್ ಪೈಲಟ್ಗೆ ಟಾಂಗ್ ಕೊಟ್ಟಿದ್ದಾರೆ.
ನನ್ನನ್ನು ಬಿಡಲು ಸಿದ್ದವಿಲ್ಲ
ಇತ್ತೀಚಿಗೆ ನನ್ನನ್ನು ಮಹಿಳಾ ಕಾರ್ಯಕರ್ತರೊಬ್ಬರು ಭೇಟಿಯಾಗಿದ್ದರು, ಅವರು ನೀವೇ ನಾಲ್ಕನೇ ಬಾರಿಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರೆ ಚೆಂದ ಎಂದು ಹೇಳಿದ್ದಾರೆ. ಆದರೆ, ನಾನು ಸಿಎಂ ಪದವಿಯನ್ನು ತೊರೆಯಲು ಸಿದ್ಧನಿದ್ದೇನೆ. ಆದರೆ, ಆ ಪದವಿ ನನ್ನನ್ನು ಬಿಡಲು ಸಿದ್ದವಿಲ್ಲ ಎಂದು ಆ ಮಹಿಳೆಗೆ ಹೇಳಿದ್ದೇನೆ.
ಪಕ್ಷ ನನ್ನಲ್ಲಿರುವ ವಿಶೇಷತೆಗಳನ್ನು ಗುರುತಿಸಿ ಮುರು ಬಾರಿ ರಾಜ್ಯವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟಿದೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ಎಲ್ಲರಿಗೂ ಒಪ್ಪಿಗೆಯಾಗುತ್ತದೆ. ಬಿಜೆಪಿ ಕುತಂತ್ರ ರಾಜಕಾರಣದಿಂದಾಗಿ ಕಾಂಗ್ರೆಸ್ನಲ್ಲಿ ಒಳಜಗಳವಾಗುತ್ತಿದೆ ಹೊರತು ಬೇರೇನಿಲ್ಲ. ಕಾಂಗ್ರೆಸ್ನಲ್ಲಿ ಒಗ್ಗಟ್ಟಿದ್ದು, ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅದು ಸಾಬೀತಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ; ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ನವೆಂಬರ್ 22ರವರೆಗೆ ವಿಸ್ತರಣೆ
ಮಗ್ಗಲ ಮುಳ್ಳಾಗುವ ಸಾಧ್ಯತೆ
2020ರಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಬಂಡಾಯವೆದಿದ್ದ ಸಚಿನ್ ಪೈಲಟ್ ಹಾಗೂ ಬೆಂಬಲಿಗ ಶಾಸಕರನ್ನು ಸಮಾಧಾನ ಪಡಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿತ್ತು. ಚುನಾವಣೆಯ ಹೊಸ್ತಿಲಲ್ಲೇ ಅಶೋಕ್ ಗೆಹ್ಲೋಟ್ ತಮ್ಮ ಬದ್ದವೈರಿ ಸಚಿನ್ ಪೈಲಟ್ ಹೆಸರೇಳದೆ ಪರೋಕ್ಷವಾಗಿ ಟಾಂಗ್ ಕೊಟ್ಟಿರುವುದು ಕಾಂಗ್ರೆಸ್ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ವಿಪಕ್ಷ ಬಿಜೆಪಿ 41 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.