ಅಗರ್ತಲ: ಕಾಲೇಜು ಆವರಣದಲ್ಲಿ ಪೂಜಿಸಲಾಗುತ್ತಿರುವ ಸರಸ್ವತಿ ದೇವಿಯ ವಿಗ್ರಹದಲ್ಲಿ ಅಶ್ಲೀಲತೆಯನ್ನು ತೋರಿಸಲಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅಗರ್ತಲಾದಲ್ಲಿರುವ ತ್ರಿಪುರಾ ಸರ್ಕಾರಿ ಆರ್ಟ್ ಅಂಡ್ ಕ್ರಾಫ್ಟ್ ಕಾಲೇಜಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಸದಸ್ಯರು ಅಗರ್ತಲದ ಲಿಚುಬಗನ್ ಏರಿಯಾದಲ್ಲಿರುವ ಕಾಲೇಜಿನಲ್ಲಿ ಧರಣಿ ನಡೆಸಿದರು. ಕಾಲೇಜಿನಲ್ಲಿ ಪೂಜಿಸಲಾಗುತ್ತಿರುವ ಸರಸ್ವತಿ ದೇವಿಯ ವಿಗ್ರಹದಲ್ಲಿ ಅಶ್ಲೀಲತೆಯನ್ನು ತೋರಿಸಲಾಗಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ಕೂಡಲೇ ವಿಗ್ರಹವನ್ನು ಸೀರೆಯಿಂದ ಮುಚ್ಚುವಂತೆ ಒತ್ತಾಯ ಮಾಡಿದರು.
ರಾಜ್ಯ ಎಬಿವಿಪಿ ಘಟಕದ ಜಂಟಿ ಕಾರ್ಯದರ್ಶಿ ದಿಬಾಕರ್ ಆಚಾರ್ಜಿ ಮಾತನಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಶಿಕ್ಷಣ ಸಂಸ್ಥೆಗಳ ಇಂತಹ ಯಾವುದೇ ನಡೆಯನ್ನು ನಮ್ಮ ಸಂಘಟನೆಯು ತೀವ್ರವಾಗಿ ವಿರೋಧಿಸುತ್ತದೆ. ನಮಗೆಲ್ಲ ತಿಳಿದಿರುವಂತೆ, ಇಂದು ಬಸಂತ್ ಪಂಚಮಿ ಮತ್ತು ನಾಡಿನಾದ್ಯಂತ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಅಗರ್ತಲದ ಸರ್ಕಾರಿ ಆರ್ಟ್ ಅಂಡ್ ಕ್ರಾಫ್ಟ್ ಕಾಲೇಜಿನಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಅತ್ಯಂತ ತಪ್ಪಾಗಿ ಕೆತ್ತಲಾಗಿದೆ ಮತ್ತು ಅಸಭ್ಯ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬ ಸುದ್ದಿ ಬೆಳಗ್ಗೆ ನಮಗೆಲ್ಲರಿಗೂ ಬಂದಿತು. ಕೂಡಲೇ ನಾವು ಸ್ಥಳವನ್ನು ತಲುಪಿ ಪ್ರತಿಭಟನೆ ನಡೆಸಿದೆವು. ಪೂಜೆಯನ್ನು ನಿಲ್ಲಿಸುವಂತೆ ನಾವು ಕಾಲೇಜು ಅಧಿಕಾರಿಗಳನ್ನು ಆಗ್ರಹಿಸಿದ್ದೇವೆ ಮತ್ತು ವಿಗ್ರಹವನ್ನು ಸೀರೆಯಿಂದ ಮುಚ್ಚುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದ್ದೇವೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿಯ ನಡೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದರು.
ಕಾಲೇಜು ಪ್ರಾಧಿಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪ್ರಾಂಶುಪಾಲರನ್ನೂ ವಜಾಗೊಳಿಸಬೇಕು ಎಂದು ದಿಬಾಕರ್ ಆಚಾರ್ಜಿ ಅವರು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರನ್ನು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)
ನೆಕ್ಸಾನ್ ಇವಿ ಕಾರಿನ ಬೆಲೆಯಲ್ಲಿ 1.2 ಲಕ್ಷ ರೂ. ಕಡಿತ! ಟಾಟಾ ಮೋಟಾರ್ಸ್ನಿಂದ ಅಚ್ಚರಿಯ ನಿರ್ಧಾರ
6ನೇ ತರಗತಿಯಲ್ಲೇ ಲವ್ ಲೆಟರ್! ಶಾಲಾ ವ್ಯಾನ್ ಬಳಿ ನಡೆದಿದ್ದನ್ನು ಮರೆಯೋಕ್ಕಾಗಲ್ಲ ಎಂದ ಹನಿ ರೋಸ್