ಕಾರವಾರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ(ವಿಟಿಯು)ದ ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ಬಗ್ಗೆ ದಿನಕ್ಕೊಂದು ಆದೇಶ ಹೊರಡಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.
ಎಂಬಿಎ, ಎಂಟೆಕ್, ಎಂಆರ್ಚ್ ಮುಂತಾದ ತರಗತಿಗಳ 3 ಹಾಗೂ 5ನೇ ಸೆಮಿಸ್ಟರ್ಗಳಿಗೆ ಜ. 27ರಂದು ಪ್ರಾಯೋಗಿಕ ಹಾಗೂ ಜ. 28ರಿಂದ ಲಿಖಿತ ಪರೀಕ್ಷೆಗೆ ವೇಳಾ ಪಟ್ಟಿಯನ್ನು ವಿಟಿಯು ಪ್ರಕಟಿಸಿದೆ.
500 ರೂ. ದಂಡದೊಂದಿಗೆ ಪರೀಕ್ಷೆ ನಮೂನೆ ಭರ್ತಿ ಮಾಡಲು ಹಾಗೂ ಶುಲ್ಕ ಪಾವತಿಗೆ ಜ. 16 ರವರೆಗೆ ಕೊನೆಯ ದಿನಾಂಕ ನಿಗದಿ ಮಾಡಲಾಗಿತ್ತು. ಬುಧವಾರ ಸುತ್ತೋಲೆಯೊಂದನ್ನು ಹೊರಡಿಸಿದ ವಿಟಿಯು, ಶುಲ್ಕ ಪಾವತಿಸಿ ನಮೂನೆ ಭರ್ತಿ ಮಾಡಲು ಜ. 21ರವರೆಗೆ ಹಾಗೂ ದಂಡದೊಂದಿಗೆ ಶುಲ್ಕ ಭರ್ತಿಗೆ ಜ. 30 ರವರೆಗೆ ಅವಕಾಶ ಕಲ್ಪಿಸಿದೆ. ಆದರೆ, ಪರೀಕ್ಷಾ ಶುಲ್ಕ ಪಾವತಿಗೆ ಕೊನೆಯ ದಿನಾಂಕ ಮುಗಿಯುವ ಮೊದಲೇ ಪರೀಕ್ಷಾ ದಿನಾಂಕ ನಿಗದಿ ಮಾಡಿದ್ದು ಹೇಗೆ ಎಂಬ ಪ್ರಶ್ನೆ ವಿದ್ಯಾರ್ಥಿಗಳದ್ದು.
ಮಾರ್ಚ್, ಏಪ್ರೀಲ್ನಲ್ಲಿ ಇಂಜಿನಿಯರಿಂದ ಪರೀಕ್ಷೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದಾರೆ ಎಂಬ ಸುದ್ದಿಯೂ ಹರಡಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ವಿಟಿಯು ಯಾವುದೇ ಪರೀಕ್ಷೆ ಮುಂದೂಡಿಲ್ಲ ಎಂದು ಹೇಳುತ್ತಿದೆ. ವಿಟಿಯು ಹೇಳುವುದು ಸರಿಯೇ ಅಥವಾ ಸಚಿವರ ಹೇಳಿಕೆ ಸರಿಯೇ ಎಂಬುದು ತಿಳಿಯದೇ ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ.
ಯಾವುದೇ ಪರೀಕ್ಷೆಗಳನ್ನು ಮುಂದೂಡಿಲ್ಲ. ಶೇ. 99ರಷ್ಟು ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಿದ್ದಾರೆ. ಕೆಲವು ತಾಂತ್ರಿಕ ಕಾರಣದಿಂದ ಶುಲ್ಕ ಪಾವತಿ ಮಾಡಲಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು. ಜ. 30ರವರೆಗೂ ದಿನಾಂಕ ವಿಸ್ತರಿಸಲಾಗಿದೆ. ಜ. 30ರ ಮೊದಲು ಪರೀಕ್ಷೆ ಇರುವ ವಿದ್ಯಾರ್ಥಿಗಳು ಇಂದು, ನಾಳೆಯೊಳಗೆ ಶುಲ್ಕ ಪಾವತಿಸಿ ಪರೀಕ್ಷೆಗೆ ಕುಳಿತುಕೊಳ್ಳಬಹುದು. ಶುಲ್ಕ ಪಾವತಿಸದವರಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿಲ್ಲ.
| ಕರಿಸಿದ್ದಪ್ಪ, ವಿಟಿಯು ವಿಸಿ
ಕೋವಿಡ್ ಕಾರಣದಿಂದ ವಿದ್ಯಾರ್ಥಿಗಳು ಹೊರ ಊರುಗಳಲ್ಲಿದ್ದಾರೆ. ಪರೀಕ್ಷೆ ದಿನಾಂಕ ಹಾಗೂ ಶುಲ್ಕ ಪಾವತಿ ವಿಚಾರದ ಬಗ್ಗೆ ಕಾಲೇಜ್ಗಳಲ್ಲೂ ಸ್ಪಷ್ಟತೆ ಇಲ್ಲ. ಇದರಿಂದ ಗೊಂದಲ ಉಂಟಾಗಿದೆ. ಈ ಬಗ್ಗೆ ವಿಟಿಯು ಸ್ಪಷ್ಟನೆ ನೀಡಬೇಕು.
| ಶುಭಂ ಕಳಸ, ವಿದ್ಯಾರ್ಥಿ, ಕಾರವಾರ