More

    ವಚನ ಸಾಹಿತ್ಯದ ಅರಿವು ಮೂಡಲಿ

    ಅಥಣಿ: ಮಕ್ಕಳಿಗೆ ಸಂಸ್ಕಾರದ ಅಗತ್ಯವಿದೆ. ಪ್ರತಿ ಮನೆಯಲ್ಲಿ ಮಕ್ಕಳಿಗೆ ವಚನ ಸಾಹಿತ್ಯವನ್ನು ತಿಳಿಸುವ ಮೂಲಕ ನಮ್ಮ ಶರಣ ಸಂಸ್ಕೃತಿ, ಸಂಸ್ಕಾರವನ್ನು ಬಿತ್ತಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಅವರು ಶನಿವಾರ ಸಂಜೆ ಇಲ್ಲಿಯ ಗಚ್ಚಿನಮಠದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬಸವಣ್ಣನವರ ವಚನಗಳು ನಮ್ಮ ಬದುಕಿಗೆ ಬೆಳಕಾಗಿವೆ. ಈ ನಿಟ್ಟಿನಲ್ಲಿ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳು ನಡೆದು ತೋರಿಸಿದ್ದಾರೆ. ಅವರ ಬದುಕು ಎಲ್ಲ ಮಠಾಧೀಶರಿಗೆ ಮಾದರಿಯಾಗಿದೆ. ಅದರಂತೆ ಈಗಿನ ಶಿವಬಸವ ಸ್ವಾಮೀಜಿಯವರು ನಿರಂತರವಾಗಿ ಸಮಾಜ ಪರಿವರ್ತನೆಯಲ್ಲಿ ಶ್ರಮಿಸುತ್ತಿದ್ದಾರೆ ಎಂದರು. ಚಿಕ್ಕಂದಿನಿಂದಲೂ ಈ ಮಠದ ಭಕ್ತರಾಗಿರುವುದಾಗಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.

    ವಿಜಯಪುರದ ವನಶ್ರೀ ಮಠದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಇಂದು ಮಠ-ಪೀಠಕ್ಕಾಗಿ ಸ್ವಾಮೀಜಿಗಳು ಕಿತ್ತಾಡುತಿರುವುದನ್ನು ನೋಡುತ್ತಿದ್ದೇವೆ. ಆದರೆ, 19ನೇ ಶತಮಾನದಲ್ಲಿ ಮುರುಘೇಂದ್ರ ಶಿವಯೋಗಿಗಳು ತಮ್ಮ ಶಿಷ್ಯ ಭಕ್ತರಾಗಿದ್ದ ಸಿದ್ಧಲಿಂಗ ಅಪ್ಪಗಳನ್ನು ಮಠಕ್ಕೆ ಪೀಠಾಧಿಪತಿಯನ್ನಾಗಿಸಿರುವುದು ಭಾರತ ದೇಶದಲ್ಲಿ ಇತಿಹಾಸವಾಗಿದೆ. ಅಥಣಿ ಗಚ್ಚಿನಮಠ ನಾಡಿನ ಎಲ್ಲ ಮಠಗಳಿಗೂ ತವರುಮನೆ ಇದ್ದಂತೆ ಎಂದರು. ಇಲ್ಲಿಂದ ನಾಲ್ಕು ಜನ ಜಗದ್ಗುರುಗಳಾಗಿರುವುದು ಶಿವಯೋಗಿಗಳ ಆಶೀರ್ವಾದದಿಂದ ಎಂಬುವುದನ್ನು ಮರೆಯಬಾರದು ಎಂದರು.

    ಶಿವಬಸವ ಸ್ವಾಮೀಜಿ ಮಾತನಾಡಿ, ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಬದುಕನ್ನು ಮುನ್ನುಗ್ಗಿಸಿಕೊಂಡು ಹೋಗುತ್ತಿದ್ದೇವೆ. ಜನಪರ-ಜೀವಪರ ಕಾಳಜಿ ವಹಿಸಿ ಶಿವಯೋಗಿಗಳು ಬಸವಣ್ಣನವರ ನೆರಳಿನಂತೆ ಬದುಕಿದವರು. ಶಿವಯೋಗಿಗಳ ಸಂಸ್ಕೃತಿಗೆ ನಾವು ವಾರಸುದಾರರಾಗಬೇಕು. ನಮ್ಮ ಗಡಿಭಾಗದ ಜನತೆ ಶರಣ ಸಂಸ್ಕೃತಿ ಉತ್ಸವದಲ್ಲಿ ಅತ್ಯಂತ ಸಂತೋಷದಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದಾರೆ. ಅವರ ಪ್ರೀತಿ, ವಿಶ್ವಾಸ, ಸಹಕಾರ ಸದಾ ಗಚ್ಚಿನಮಠದ ಮೇಲೆ ಇರಲಿ ಎಂದು ಆಶಿಸಿದರು. ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಯುವ ಧುರೀಣ ಚಿದಾನಂದ ಸವದಿ ಮಾತನಾಡಿ, ಶಿವಯೋಗಿಗಳು ಪ್ರತಿ ಜೀವಿಯಲ್ಲೂ ದೇವರನ್ನು ಕಂಡ ಮಹಾನ್ ತಪಸ್ವಿ. ಅದಕ್ಕಾಗಿ ಗಚ್ಚಿನಮಠದ ಕಾರ್ಯಕ್ರಮವೆಂದರೆ ಅದು ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಿದೆ ಎಂದರು.

    ಸಮಾರಂಭದಲ್ಲಿ ಹಲ್ಯಾಳದ ಗುರುಸಿದ್ಧ ಸ್ವಾಮೀಜಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಕೆಪಿಟಿಸಿಎಲ್ ನಿವೃತ್ತ ನಿರ್ದೇಶಕ ಕೆ.ವಿ. ಶಿವಕುಮಾರ, ಉದ್ಯಮಿಗಳಾದ ಸಂತೋಷ ಸಾವಡಕರ, ಎಂ.ಎಂ. ನಾಗರಾಜ, ಪ್ರಕಾಶ ಸಾಂಬ್ರಾಣಿ, ಕೆ. ರಕ್ಷಿತ ಮತ್ತಿತರರು ಇದ್ದರು.

    ಸಿದ್ಧಲಿಂಗ ಶ್ರೀಗಳ ಪಲ್ಲಕ್ಕಿ ಉತ್ಸವ ಸಂಭ್ರಮ..

    ಲಿಂ. ಸಿದ್ಧಲಿಂಗ ಸ್ವಾಮೀಜಿಯವರ ಸ್ಮರಣೋತ್ಸವ ನಿಮಿತ್ತ ಭಾನುವಾರ ಪಲ್ಲಕ್ಕಿ ಉತ್ಸವ
    ಜರುಗಿತು. ಗಚ್ಚಿನಮಠದ ಶಿವಬಸವ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿದರು. ಬೆಳಗ್ಗೆ ಗದ್ದುಗೆಗೆ ವಚನಾಭೀಷೆಕ, ವಿಶೇಷ ಪೂಜೆ ಸಲ್ಲಿಸಿ ಸಿದ್ಧಲಿಂಗ ಅಪ್ಪಗಳ ಭಾವಚಿತ್ರವನ್ನು ಪಲ್ಲಕಿಯಲ್ಲಿಟ್ಟು ಸಮಗ್ರ ವಚನ ಸಂಪುಟದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು. ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ , ಉದಯ ಕಾರವೇಕಾರ, ಸುರೇಶ ಗೋಟಖಿಂಡಿ, ಶಿವಪಾದ ಹುಂಡೇಕಾರ, ಎಂ.ಜಿ. ಕನಶೆಟ್ಟಿ, ಈರನಗೌಡ ಪಾಟೀಲ ಇತರರು ಪಾಲ್ಗೊಂಡಿದ್ದರು.

    ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳ ಕರ್ತೃತ್ವ ಶಕ್ತಿಯು ತುಂಬಾ ಅಗಾಧವಾಗಿದೆ. ಶಿವಯೋಗಿಗಳ ಆಶೀರ್ವಾದ ಪಡೆದು ಚಿತ್ರದುರ್ಗದ ಮೂರು ಜನ ಜಗದ್ಗುರುಗಳಾಗಿ ಆ ಪರಂಪರೆಯನ್ನು ಉಳಿಸಿ ಬೆಳೆಸಿದ್ದಾರೆ. ಹಾಗೆಯೇ ಪಂಚಪೀಠಗಳ ಪರಂಪರೆಯಲ್ಲಿ ಶ್ರೀಶೈಲ ಪೀಠದ ಜಗದ್ಗುರುಗಳಾದ ಲಿಂ. ವಾಗೀಶ ಪಂಡಿತಾರಾಧ್ಯರು ಪ್ರೇರಣೆಯನ್ನು ಪಡೆದು ಜಗದ್ಗುರುಗಳಾಗಿದ್ದು ಕೂಡ ಇತಿಹಾಸವಾಗಿದೆ.
    | ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts