ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪದ್ಮಭೂಷಣ ಎಸ್.ಎಲ್.ಭೈರಪ್ಪನವರ ‘ಪರ್ವ’ ಕಾದಂಬರಿ ಸಿನಿಮಾ ಆಗಲಿದೆ. ಭಾರತದ ಇಕ್ಕೆಲಗಳನ್ನು ಸುತ್ತಿ, ಸಾಕಷ್ಟು ಸಂಶೋಧನೆ ನಡೆಸಿ ‘ಪರ್ವ’ ಮೂಲಕ ಮಹಾಭಾರತವನ್ನ ಆಯಾ ಪಾತ್ರಗಳ ಮೂಲಕ ಮತ್ತೊಮ್ಮೆ ಹೇಳುವ ಪ್ರಯತ್ನ ಮಾಡಿದ್ದರು ಎಸ್.ಎಲ್. ಭೈರಪ್ಪ. 1979ರಲ್ಲಿ ಮೊದಲ ಬಾರಿ ಕನ್ನಡದಲ್ಲಿ ಮುದ್ರಣಗೊಂಡ ಈ ಕಾದಂಬರಿ, ಕ್ರಮೇಣ ಬೆಂಗಾಲಿ, ಹಿಂದಿ, ತಮಿಳು, ತೆಲುಗು, ಮರಾಠಿ, ಮಲಯಾಳಂ ಸೇರಿ ಇಂಗ್ಲೀಷ್, ಚೈನೀಸ್, ರಷಿಯನ್ ಭಾಷೆಗಳಲ್ಲೂ ಅನುವಾದವಾಗಿದೆ.
ಇದನ್ನೂ ಓದಿ : ಶಂಕರನ ಟೀಸರ್ ಸಪ್ಲೈ! ನಿಶ್ಚಿತ್ ಕರೋಡಿ, ದೀಪಿಕಾ ಆರಾಧ್ಯ ನಟಿಸಿರುವ ಚಿತ್ರ
ಕಳೆದ ಕೆಲವು ವರ್ಷಗಳಿಂದ ಇಂಗ್ಲೀಷ್ನಲ್ಲಿ ಎಂಟು ತಾಸುಗಳ ನಾಟಕವಾಗಿಯೂ ‘ಪರ್ವ’ ಪ್ರದರ್ಶನವಾಗುತ್ತಿದೆ. ಇದೀಗ 44 ವರ್ಷಗಳ ನಂತರ ‘ಪರ್ವ’ ಸಿನಿಮಾ ಆಗಲಿದೆ. ‘ತಾಷ್ಕೆಂಟ್ ಫೈಲ್ಸ್’, ‘ದಿ ಕಾಶ್ಮೀರ್ ಫೈಲ್ಸ್’ ಹಾಗೂ ‘ದಿ ವ್ಯಾಕ್ಸಿನ್ ವಾರ್’ ಚಿತ್ರಗಳ ಖ್ಯಾತಿಯ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ‘ಪರ್ವ’ ಸಿನಿಮಾ ಮೂಡಿಬರಲಿದ್ದು, ಶನಿವಾರ (ಅ.21) ಘೋಷಣೆ ಮಾಡಲಾಯಿತು. ‘ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ಕರೆ ಮಾಡಿ ಭೈರಪ್ಪನವರ ಜತೆ ಮಾತನಾಡುವಂತೆ ಹೇಳಿದರು. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ್ದ ಭೈರಪ್ಪನವರು, ನನಗೆ ‘ಪರ್ವ’ ಸಿನಿಮಾ ಮಾಡುವಂತೆ ತಿಳಿಸಿದರು. ಈ ಸಿನಿಮಾ ಮೂರು ಭಾಗಗಳಲ್ಲಿ ಮೂಡಿಬರಲಿದೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ‘ದಿ ಗರ್ಲ್ಫ್ರೆಂಡ್’ ಆಗಿ ರಶ್ಮಿಕಾ ಮಂದಣ್ಣ!
ನಂತರ ನಟಿ, ನಿರ್ಮಾಪಕಿ ಪಲ್ಲವಿ ಜೋಶಿ, ‘‘ಪರ್ವ’ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಸಿನಿಮಾ ಮೊದಲು ಕನ್ನಡ ಹಾಗು ಹಿಂದಿ ಭಾಷೆಗಳಲ್ಲಿ ರಿಲೀಸ್ ಮಾಡಲಿದ್ದೇವೆ’ ಎಂದರು. ನಂತರ ಎಸ್.ಎಲ್. ಭೈರಪ್ಪ, ‘ಕನ್ನಡ, ಹಿಂದಿ ಜತೆ ಇಂಗ್ಲೀಷ್ನಲ್ಲೂ ಸಿನಿಮಾ ಆಗಬೇಕು. ನಿಜವಾದ ಭಾರತ ಏನು ಎಂಬುದನ್ನು ವಿಶ್ವಕ್ಕೆ ತೋರಿಸಬಹುದು. ಈ ಸಿನಿಮಾ ಮಾಡಲು ನನ್ನ ಒಪ್ಪಿಗೆ, ಹಾರೈಕೆಯಿದೆ’ ಎಂದು ಶುಭಕೋರಿದರು.