ಶ್ರೀರಂಗಪಟ್ಟಣ: ತಾಲೂಕಿನ ಮರಳಗಾಲ ಗ್ರಾಮದಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ (ಎಂವಿಎಸ್) ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಸೋಮವಾರ ಪರಿಶೀಲಿಸಿದರು.
2014ರಲ್ಲಿ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಘಟಕದಿಂದ ಪ್ರಸ್ತುತ 9 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನಡುವೆ ಕಸಬಾ, ಶೆಟ್ಟಹಳ್ಳಿ, ಅರಕೆರೆ ಹೋಬಳಿ ವ್ಯಾಪ್ತಿಯ 58 ಹಳ್ಳಿಗಳಿಗೆ ಹೆಚ್ಚುವರಿಯಾಗಿ ಕುಡಿಯುವ ನೀರು ಪೂರೈಕೆ ಸಲುವಾಗಿ ಮತ್ತೊಂದು ಘಟಕ ನಿರ್ಮಾಣಕ್ಕೆ 2 ಎಕರೆ ಜಮೀನು ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಜಲಧಾರೆ ಯೋಜನೆ-3, ಡಬ್ಲೂೃಟಿಪಿ ನಿರ್ಮಾಣ ಮಾಡಲು ಸ್ಥಳ ಅಗತ್ಯವಿದ್ದು, ಈ ಸಂಬಂಧ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುವುದಾಗಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ಬಳಿಕ ಅರಕೆರೆ ಹೋಬಳಿ ವ್ಯಾಪ್ತಿಯ ವಡೆಯಾಂಡಹಳ್ಳಿಗೆ ತೆರಳಿ ಅಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಯನ್ನು ಪರಿಶೀಲಿಸಿದರು. ಎಂಟಿಬಿ ಮತ್ತು ಝಡ್ಬಿಟಿ ಟ್ಯಾಂಕ್ ನಿರ್ಮಾಣ ಮಾಡಲು ಅವಶ್ಯವಾಗಿ ಬೇಕಿರುವ ಸಾಮಗ್ರಿಗಳನ್ನು ರವಾನಿಸಲು ಅರಣ್ಯ ಇಲಾಖೆಯಿಂದ ತಡೆಹಿಡಿಯಲಾಗಿದ್ದು, ಈ ಸಂಬಂಧ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿಯನ್ನು ಸ್ಥಳಕ್ಕೆ ಕರೆಸಿಕೊಂಡು ಚರ್ಚಿಸಿದರು. ಅಲ್ಲದೆ ಕಾಮಗಾರಿಗೆ ಅವಕಾಶ ಕಲ್ಪಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮನವಿ ಮಾಡಿದ ಮೇರೆಗೆ ಕೆಲಸ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಯಿತು.
ಕೆ.ಶೆಟ್ಟಹಳ್ಳಿ ಹೋಬಳಿ ರಾಜಸ್ವ ನೀರಿಕ್ಷಕ ಮಂಜುನಾಥ್, ಅರಕೆರೆ ಹೋಬಳಿ ರಾಜಸ್ವ್ವ ನೀರಿಕ್ಷಕ ಪುಟ್ಟಸ್ವಾಮಿ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.