ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಪ್ರಕರಣದ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುವ ಜತೆಗೆ ಸ್ಯಾಂಡಲ್ವುಡ್ ಕೂಡ ಸಿಡಿದೆದ್ದ ಕಾರಣ, ಪೊಲೀಸರು ಈಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗಾಗಿ ಮತ್ತಷ್ಟು ಚುರುಕಾಗಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಷ್ಣುವರ್ಧನ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ರಾತ್ರೋರಾತ್ರಿ ಧ್ವಂಸ ಮಾಡಿರುವುದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿತ್ತು. ಈ ಪ್ರಕರಣ ಬಯಲಾಗುತ್ತಿದ್ದಂತೆ ಸ್ಥಳದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಜಮಾಯಿಸಿ ಖಂಡನೆ ವ್ಯಕ್ತಪಡಿಸಿದ್ದರು. ಮೈಸೂರಲ್ಲೂ ವಿಷ್ಣು ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.
ಜತೆಗೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಚಿವ ವಿ.ಸೋಮಣ್ಣ ಮುಂತಾದವರು ಶನಿವಾರವೇ ಈ ಘಟನೆಯನ್ನು ಖಂಡಿಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಇಂದು ಬೆಳಗ್ಗೆ ನಟ ಕಿಚ್ಚ ಸುದೀಪ್ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಜಗ್ಗೇಶ್ ಕೂಡ ಘಟನೆಯನ್ನು ಖಂಡಿಸಿ ದನಿಗೂಡಿಸಿದ್ದಾರೆ. ಹೀಗೆ ವಿಷ್ಣುವರ್ಧನ್ ಪರ ದನಿ ಜೋರಾಗುತ್ತಿದ್ದಂತೆ ಮತ್ತಷ್ಟು ಚುರುಕಾಗಿರುವ ಪೊಲೀಸರು, ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಕಿಡಿಗೇಡಿಗಳ ವಿರುದ್ಧ ಸೆಕ್ಷನ್ 427 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಘಟನಾ ಸ್ಥಳದಲ್ಲಿ ಶನಿವಾರ ಓಡಾಡಿದ್ದವರ ಮಾಹಿತಿ ಕಲೆಹಾಕಲು ಆರಂಭಿಸಿದ್ದಾರೆ.
ಸಾಹಸಸಿಂಹ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳು: ಮಾಗಡಿ ರಸ್ತೆಯಲ್ಲಿ ಕೃತ್ಯ