ಕೇಪ್ಟೌನ್: ಹರಿಣಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸುವ ಕನಸು ಭಗ್ನಗೊಂಡ ಬಳಿಕ ಸರಣಿ ಸಮಬಲ ಸಾಧಿಸುವ ನಿರೀಕ್ಷೆಯಲ್ಲಿ ಭಾನುವಾರ ಕೇಪ್ಟೌನ್ಗೆ ಪ್ರಯಾಣಿಸಿದ ಟೀಮ್ ಇಂಡಿಯಾ ಆಟಗಾರರು ಸೋಮವಾರ ಅಭ್ಯಾಸ ನಡೆಸಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ದ.ಆಫ್ರಿಕಾ ವೇಗಿಗಳ ಬೌನ್ಸರ್ ಎದುರು ಪರದಾಡಿದ ಬ್ಯಾಟರ್ಗಳಾದ ಶ್ರೇಯಸ್ ಅಯ್ಯರ್, ಮಾಜಿ ನಾಯಕ ವಿರಾಟ್ ಕೊಹ್ಲಿ ನೆಟ್ಸ್ನಲ್ಲಿ ಶಾರ್ಟ್ಬಾಲ್ಗಳನ್ನು ಎದುರಿಸುವ ಮೂಲಕ ಕಠಿಣ ತಾಲೀಮು ನಡೆಸಿದರು. ನಿರ್ದಿಷ್ಟ ಸವಾಲಿನ ಗುರಿಯೊಂದಿಗೆ ನೆಟ್ಸ್ಗೆ ಆಗಮಿಸಿದ ವಿರಾಟ್ ಒಂದು ಗಂಟೆಗೂ ಅಧಿಕ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಟೀಮ್ ಇಂಡಿಯಾದಲ್ಲಿ ಎಡಗೈ ವೇಗಿ ಬೌಲರ್ಗಳಿಲ್ಲದ ಕಾರಣ ಸ್ಥಳೀಯ ನೆಟ್ ಬೌಲರ್ಗಳನ್ನು ಕೊಹ್ಲಿ ಎದುರಿಸಿದರು. ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಆರ್.ಅಶ್ವಿನ್ ಮತ್ತು ಆವೇಶ್ ಖಾನ್ ಅವರಿಂದ 25 ರಿಂದ 30 ಎಸೆತಗಳನ್ನು ಎದುರಿಸಿದ ಕೊಹ್ಲಿ, ನಂತರ 20 ರಿಂದ 25 ನಿಮಿಷ ಥ್ರೋ ಡೌನ್ ಎಸೆತ ಎದುರಿಸಿದರು.
ಸೆಂಚುರಿಯನ್ ಟೆಸ್ಟ್ನಲ್ಲಿ ಶಾರ್ಟ್ ಬಾಲ್ ಗೆ ವಿಕೆಟ್ ಒಪ್ಪಿಸುವ ಮೂಲಕ ತನ್ನ ಬ್ಯಾಟಿಂಗ್ ದೌರ್ಬಲ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದ ಶ್ರೇಯಸ್ ಅಯ್ಯರ್ ಸಹ ನೆಟ್ಸ್ನಲ್ಲಿ ಕೊಹ್ಲಿಗೆ ಸಾಥ್ ನೀಡಿದರು. ಅಭ್ಯಾಸದ ವೇಳೆ ಹೊಟ್ಟೆಗೆ ಬಲವಾದ ಚೆಂಡೇಟು ತಿಂದ ಅಯ್ಯರ್ ಕೆಲಕಾಲ ಅಭ್ಯಾಸವನ್ನು ನಿಲ್ಲಿಸಿದ್ದರು. ಶನಿವಾರದ ಅಭ್ಯಾಸ ವೇಳೆ ಎಡ ಭುಜಕ್ಕೆ ಬಲವಾದ ಪೆಟ್ಟು ತಿಂದಿದ್ದ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಅಭ್ಯಾಸ ನಡೆಸುವ ಮೂಲಕ ಗಾಯದಿಂದ ಚೇತರಿಸಿಕೊಂಡಿರುವ ಸೂಚನೆ ನೀಡಿದರು.