ಲಖನೌ: ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿರುವ ಘಟನೆ ಉತ್ತರಪ್ರಧೇಶದ ನೋಯ್ಡಾದ ಗಾರ್ಡನ್ ಗ್ಯಾಲೇರಿಯಾ ಮಾಲ್ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಎರಡು ಗುಂಪುಗಳ ಸದಸ್ಯರ ಪರಸ್ಪರ ನಿಂದಿಸುತ್ತಾ ಹೊಡೆದಾಡುತ್ತಿರುವುದನ್ನು ಕಾಣಬಹುದು. ಕುಡಿದ ಮತ್ತಿನಲ್ಲಿ ಗಲಾಟೆಯಾಗಿದ್ದು, ಪಬ್ನ ಸಿಬ್ಬಂದಿ ಜಗಳ ಬಿಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನೋಯ್ಡಾ ಎಸಿಪಿ ರಜನೀಶ್ ವರ್ಮಾ ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಯಾವ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾರೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.
ಇದನ್ನೂ ಓದಿ: ಗದರ್-2 ಸಕ್ಸಸ್ ಮೀಟ್; ಮುನಿಸು ಮರೆತು ಒಂದಾದ ಶಾರುಖ್-ಸನ್ನಿ ಡಿಯೋಲ್
ಇದೇ ಮೊದಲಲ್ಲ
ಹೊಡೆದಾಟದ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೆಕ್ಟರ್-39ರ ಪೊಲೀಸ್ ಠಾಣಾಧಿಕಾರಿಗೆ ಸೂಚಿಸಿದ್ದೇವೆ. ಅಗತ್ಯವಿದ್ದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ಗಾರ್ಡನ್ ಗ್ಯಾಲೇರಿಯಾ ಮಾಲ್ನಲ್ಲಿ ಪದೇ ಪದೇ ಈ ರೀತಿಯ ಅಹಿತಕರ ಘಟನೆಗಳು ನಡೆಯುತ್ತಿದ್ದು, ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ನೋಯ್ಡಾ ಎಸಿಪಿ ರಜನೀಶ್ ವರ್ಮಾ ತಿಳಿಸಿದ್ದಾರೆ.
ಕಳೆದ ವರ್ಷ ನಡೆದ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜಕೀಯದ ವಿಚಾರವಾಗಿ ಆರಂಭವಾದ ಗಲಾಟೆಯೂ ಒಬ್ಬರ ಅಂತ್ಯದಲ್ಲಿ ಕೊನೆಗೊಂಡಿತ್ತು. ಘಟನೆಯಲ್ಲಿ ಇನ್ನಿಬ್ಬರು ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಗಾರ್ಡನ್ ಗ್ಯಾಲೇರಿಯಾ ಮಾಲ್ನ ಪಬ್ನಲ್ಲಿ ಈ ಘಟನೆ ನಡೆದಿತ್ತು.