ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಅನಿವಾರ್ಯತೆ ಇದೆ ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ಹೇಳಿದರು,
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ ಬಳಿಕ ದಿಗ್ವಿಜಯ ನ್ಯೂಸ್ನೊಂದಿಗೆ ವಿನಯ್ ಗುರೂಜಿ ಮಾತನಾಡಿದರು. ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವ ವಿಚಾರವಾಗಿ ಚರ್ಚಿಸಲು ಬಂದಿದ್ದೆವು. ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಗೋಹತ್ಯೆ ನಿಷೇಧ ಅನಿವಾರ್ಯ ಇದೆ. ಅಧಿಕಾರಿಗಳ ಜತೆ ಚರ್ಚೆ ಮಾಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ನಾನು ಕೊಟ್ಟ ಸಲಹೆಗಳನ್ನು ಸಿಎಂ ಅವರು ಇದುವರೆಗೂ ನಿರಾಕರಿಸಿಲ್ಲ. ಈ ಮನವಿನ್ನೂ ಈಡೇರಿಸುವ ಭರವಸೆ ಇದೆ ಎಂದರು.
ಇದೇ ವೇಳೆ ಕರೊನಾ ವಿಚಾರವಾಗಿ ಮಾತನಾಡಿ, ಕರೊನಾ ವೇಗ ಕಡಿಮೆ ಆಗುತ್ತದೆ ಎಂದು ಹೇಳಿದ್ದೆ. ನಮ್ಮ ದೇಶ ಪುಣ್ಯ ಭೂಮಿ ಹೀಗಾಗಿ ಮೃತ್ಯು ಸಂಖ್ಯೆ ಕಡಿಮೆ. ಸ್ವದೇಶಿ ಆಹಾರ ಮತ್ತು ಹೋಮ ಹವನ ಮಾಡುವುದರಿಂದ ಮಾತ್ರ ನಾವು ಇದರಿಂದ ಬಚಾವ್ ಆಗಲು ಸಾಧ್ಯ. ನೆರೆ ಕಡಿಮೆ ಆಗಲು ರಾಜ್ಯದ ಜನ ಪ್ರಾರ್ಥನೆ ಮಾಡಬೇಕು. ಎರಡರಿಂದಲೂ ರಾಜ್ಯ ಪಾರಾಗುತ್ತದೆ. ದೊಡ್ಡ ಮಟ್ಟದ ಅನಾಹುತದಿಂದ ಪಾರಾಗ್ತಿವಿ ಎಂದರು.
ವಿನಯ್ ಗುರೂಜಿ ತಿಂದುಳಿದ ಅನ್ನವನ್ನು ಪ್ರಸಾದ ರೂಪದಲ್ಲಿ ಹಂಚ್ತಾರೆ ಎಂಬ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಇದರ ಬಗ್ಗೆ ನೋ ಕಾಮೆಂಟ್. ಅವರವರ ಭಾವ ಅವರವರದ್ದು. ಅವರು ಹೇಳಿದ ಸನ್ನಿವೇಶ ಅಲ್ಲಿರಲಿಲ್ಲ. ನಾನೇ ನಿಶ್ಚಯ ಮಾಡಿದ ಮದುವೆ ಅದು. ನಾನು ಊಟ ಮಾಡಿದ ಮೇಲೆ ತಟ್ಟೆ ಎಲ್ಲಿಟ್ಟಿದೀನಿ? ಲೋಟ ಎಲ್ಲಿಟ್ಟಿದೀನಿ? ಎಂದು ನೋಡೋಕೆ ಆಗಲ್ಲ. ಅದು ನನ್ನ ಗಮನಕ್ಕೆ ಬರದೇ ನಡೆದಿರುವ ಪ್ರಸಂಗ. ನನ್ನ ಗಮನಕ್ಕೆ ಬಂದಿದ್ರೆ ಗಾಂಧಿವಾದದ ಥರ ನಾನು ಖಂಡಿಸುತ್ತಿದ್ದೆ. ಲಿಂಗಾಯತರಲ್ಲಿ ಒಂದು ಸಂಪ್ರದಾಯ ಇದೆ. ನಾನು ಊಟ ಮಾಡಿದ ಮೇಲೆ ಪ್ರಸಾದವನ್ನು ತೆಗೆದುಕೊಂಡು ಹೋಗ್ತಾರೆ ಎಂದು ಸ್ಪಷ್ಟನೆ ನೀಡಿದರು. (ದಿಗ್ವಿಜಯ ನ್ಯೂಸ್)