ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರವು ಹಿಟ್ ಆಗುವುದಕ್ಕೆ ಪ್ರಮುಖ ಕಾರಣವೆಂದರೆ, ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದ ಅವರ ತಂದೆ ವಿಜಯೇಂದ್ರ ಪ್ರಸಾದ್. ಈಗ ಅವರು ಕೆಲವು ವರ್ಷಗಳ ನಂತರ ಕನ್ನಡ ಚಿತ್ರವೊಂದಕ್ಕೆ ಕಥೆ ಬರೆಯುತ್ತಿದ್ದು, ಮುಂದಿನ ವರ್ಷ ಆ ಚಿತ್ರ ಸೆಟ್ಟೇರಲಿದೆ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಪ್ರಸಿದ್ಧ ಹಾಸ್ಯ ನಟಿ ದಂಪತಿ ಭಾಗಿ? ಎನ್ಸಿಬಿ ಅಧಿಕಾರಿಗಳಿಂದ ದಂಪತಿಯ ವಿಚಾರಣೆ
ವಿಜಯೇಂದ್ರ ಪ್ರಸಾದ್ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ಅವರು ವಿಷ್ಣುವರ್ಧನ್ ಅಭಿನಯದ ‘ಅಪ್ಪಾಜಿ’, ಶಿವರಾಜಕುಮಾರ್ ಅಭಿನಯದ ‘ಕುರುಬನ ರಾಣಿ’, ರವಿಚಂದ್ರನ್ ಅಭಿನಯದ ‘ಪಾಂಡುರಂಗ ವಿಠಲ’, ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ಮುಂತಾದ ಚಿತ್ರಗಳಿಗೆ ಕಥೆ-ಚಿತ್ರಕಥೆ ಬರೆದಿದ್ದಾರೆ. ಇದೀಗ ಅವರು ಅವತಾರ್ ಅಭಿನಯದ ಹೊಸ ಚಿತ್ರವೊಂದಕ್ಕೆ ಕಥೆ ಬರೆಯುತ್ತಿದ್ದಾರೆ.
ಅವತಾರ್ ಅವರ ಮೂಲ ಹೆಸರು ಮನೋಜ್ ಪುತ್ತೂರು. ಈಗಾಗಲೇ ಅವರು ಎರಡು ತುಳು, ನಾಲ್ಕು ಕನ್ನಡ ಹಾಗೂ ಒಂದು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದಲ್ಲಿ ನಟಿಸಿರುವ ಅವರು, ‘ಕುಡ್ಲಾ ಕೆಫೆ’ ಚಿತ್ರದಲ್ಲಿನ ನೆಗೆಟಿವ್ ಪಾತ್ರಕ್ಕೆ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಮನೋಜ್ ತಮ್ಮ ಹೆಸರನ್ನು ಅವತಾರ್ ಎಂದು ಬದಲಿಸಿಕೊಂಡಿದ್ದು, ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಿರುವ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಧ್ರುವ ತಮ್ಮ ಕೂದಲನ್ನು ಏನು ಮಾಡಿದರು ಗೊತ್ತಾ?
ಕೆಲವು ದಿನಗಳ ಹಿಂದೆ ತೆಲುಗು ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಾಬಾದ್ಗೆ ಹೋಗಿದ್ದ ಅವತಾರ್ಗೆ ಸ್ನೇಹಿತರೊಬ್ಬರ ಮೂಲಕ ವಿಜಯೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತಂತೆ. ಈ ಸಂದರ್ಭದಲ್ಲಿ ಅವತಾರ್ಗೆ ಸೂಕ್ತವಾಗುವಂತಹ ಒಂದು ಕಥೆ ಹೇಳಿದ್ದಾರೆ ಪ್ರಸಾದ್. ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ಮೂರು ಭಾಗಗಳಲ್ಲಿ ಇರಲಿದೆಯಂತೆ. ಸದ್ಯ ಮೊದಲ ಭಾಗದ ಚಿತ್ರಕ್ಕೆ ತಯಾರಿ ನಡೆಯುತ್ತಿದ್ದು, ಕನ್ನಡವಲ್ಲದೆ ಹಿಂದಿ, ತೆಲುಗು ಮತ್ತು ತಮಿಳಿನಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಬೆಂಗಳೂರಿನ ಉದ್ಯಮಿಯೊಬ್ಬರು ನಿರ್ಮಿಸುತ್ತಿರುವ ಈ ಚಿತ್ರದ ಕಲಾವಿದರು ಹಾಗೂ ತಂತ್ರಜ್ಱರ ಕುರಿತಾದ ಮಾಹಿತಿ ಸದ್ಯದಲ್ಲೇ ಹೊರಬೀಳಲಿದ್ದು, ಮುಂದಿನ ವರ್ಷ ಚಿತ್ರ ಪ್ರಾರಂಭವಾಗಲಿದೆ.
ರೌಡಿ ಬೇಬಿ ಬಿಲಿಯನ್ ವೀವ್ಸ್ ಸಂಭ್ರಮಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳ ಆಕ್ರೋಶ..!