ವಿಜಯಪುರ: ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳೆಲ್ಲರಿಗೂ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ಸಮಾಜ ಸೇವಾ ಸಂಘದಿಂದ ಸೋಮವಾರ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಸೆ.14 ರಂದು ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿ ನಾಲಿಗೆ ಕೊಯ್ದು ಕೊಲೆ ಮಾಡಿದ್ದಾರೆ. ಇದೊಂದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಸಂಗತಿ. ಇಂತಹ ಅಮಾನವೀಯ ಕೃತ್ಯದಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಮಾನವೀಯತೆ ಕೊಂದು ಹಾಕಿರುವಂತಹ ದುಷ್ಕರ್ಮಿಗಳನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಎಂದರು.
ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, ಸುರೇಶ ತಳವಾರ ಮಾತನಾಡಿ, ದುಷ್ಕೃತ್ಯ ಎಸಗಿದವರ ಮೇಲೆ ಎನ್ಕೌಂಟರ್ ಮಾಡಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ತಕ್ಷಣವೇ ರಾಜಿನಾಮೆ ನೀಡಬೇಕು ಎಂದರು.
ಯುವ ವೇದಿಕೆ ಅಧ್ಯಕ್ಷ ಸದಾಶಿವ ಕಡ್ಲೇವಾಡ ಮಾತನಾಡಿದರು. ಮುಖಂಡರಾದ ದುರ್ಗೆಶ ತಿಕೋಟ, ಶೇಷರಾವ ಮಾನೆ, ಅನೀಲ ಹೊಸಮನಿ, ಶ್ರೀಶೈಲ ಮುಳಜಿ, ಬಸವರಾಜ ತಾಳಿಕೋಟೆ, ಪ್ರಶಾಂತ ದಳವಾಯಿ, ಹರ್ಷದ ಹತ್ತಿ, ಲಕ್ಷ್ಮಣ ಕೋರಳಗಿ, ಹಣಮಂತ ಕಸ್ತೂರಿ, ಈರಪ್ಪ ಯಡಳ್ಳಿ ಮತ್ತಿತರರಿದ್ದರು.
ಇದಕ್ಕೂ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಎದುರು ಕೆಲ ಕಾಲ ಪ್ರತಿಭಟನೆ ನಡೆಸಲಾಯಿತು.