ವಿಜಯವಾಣಿ ಸುದ್ದಿಜಾಲ ಮಂಗಳೂರು
ಪ್ರಯಾಣಿಕರ ಬೇಡಿಕೆಯಂತೆ ಮಂಗಳೂರು ಮತ್ತು ಉತ್ತರ ಕರ್ನಾಟಕ ನಡುವೆ ಸಂಚರಿಸುತ್ತಿದ್ದ ಮಂಗಳೂರು ಜಂಕ್ಷನ್- ವಿಜಯಪುರ ಎಕ್ಸ್ಪ್ರೆಸ್ (07377/ 07378)ರೈಲು ವೇಳಾಪಟ್ಟಿ ಪರಿಷ್ಕರಿಸಿ ನೈರುತ್ಯ ರೈಲ್ವೆಯು ಅಧಿಸೂಚನೆ ಹೊರಡಿಸಿದ ಬೆನ್ನಲೇ ಈ ರೈಲನ್ನು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ವಿಸ್ತರಿಸಿದ ಆದೇಶ ಹೊರಬಿದ್ದಿದೆ.
ವಿಜಯಪುರ ನಿಲ್ದಾಣದಿಂದ ಏಪ್ರಿಲ್ 20 ರಂದು ಸಂಜೆ 3.30 ಕ್ಕೆ ಹೊರಡುವ ರೈಲು ಮರುದಿನ ಏಪ್ರಿಲ್ 21 ರಂದು ಬೆಳಗ್ಗೆ 9.30 ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತದೆ. ಬಳಿಕ 9.50 ಕ್ಕೆ ಮಂಗಳೂರು ಸೆಂಟ್ರಲ್ ತಲುಪುವುದು.
ಬಳಿಕ ಮಧ್ಯಾಹ್ನ 2.35 ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಡುವ ಈ ರೈಲು ಮರುದಿನ ಬೆಳಗ್ಗೆ 9.35 ಕ್ಕೆ ವಿಜಯಪುರ ತಲುಪಲಿದೆ.
ಪ್ರಸ್ತಾವಿತ ರೈಲು ವೇಳಾಪಟ್ಟಿ ಪರಿಷ್ಕರಿಸಬೇಕು ಮತ್ತು ಈ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಬೇಕು ಎನ್ನುವುದು ಉತ್ತರ ಕರ್ನಾಟಕದ ಜನರ ಬಹು ಕಾಲದ ಬೇಡಿಕೆಯಾಗಿತ್ತು.
ರೈಲಿನ ಹಳೇ ವೇಳಾಪಟ್ಟಿಯಲ್ಲಿ ವಿಜಯಪುರ ರೈಲು ಮಂಗಳೂರು ತಲುಪುವಾಗ ಮಧ್ಯಾಹ್ನ 12.40 ಆಗುತ್ತಿದೆ. ಇದರಿಂದ ಉತ್ತರ ಕರ್ನಾಟಕದಿಂದ ವಿವಿಧ ಅಗತ್ಯಗಳಿಗೆ ಮಂಗಳೂರಿಗೆ ಆಗಮಿಸುವ ಜನರಿಗೆ ಅದೇ ದಿನ ತಮ್ಮ ಕೆಲಸ ಮುಗಿಸಿಕೊಂಡು ಊರಿಗೆ ಮರಳಲು ಕಷ್ಟವಾಗುತ್ತಿತ್ತು.
ಹೊಸ ವೇಳಾಪಟ್ಟಿಯಲ್ಲಿ ಬೆಳಗ್ಗೆ 9.35 ಕ್ಕೆ ರೈಲು ಮಂಗಳೂರು ತಲುಪಲಿರುವುದರಿಂದ ವಿಜಯಪುರ ಕಡೆಯ ಜನರು ಹಗಲು ತಮ್ಮ ತುರ್ತು ಕೆಲಸಗಳನ್ನು ಮುಗಿಸಿಕೊಂಡು ಮಧ್ಯಾಹ್ನ ಮಂಗಳೂರು ಜಂಕ್ಷನ್ನಿಂದ ಹೊರಡುವ ರೈಲಿನಲ್ಲಿ ಅದೇ ದಿನ ಊರಿಗೆ ಮರಳಲು ಅವಕಾಶವಿದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೂ ಹೊಸ ವೇಳಾಪಟ್ಟಿ ಅನುಕೂಲಕರವಾಗಿದೆ.