More

    ಪ್ರತಿ ಟನ್ ಕಬ್ಬಿಗೆ 2750 ರೂ. ದರ ನಿಗದಿಪಡಿಸಿ

    ವಿಜಯಪುರ: ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2750 ರೂ. ದರ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

    ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಜಮಖಂಡಿ ಸಕ್ಕರೆ ಕಾರ್ಖಾನೆ, ರೇಣುಕಾ ಸಕ್ಕರೆ ಕಾರ್ಖಾನೆ ಸೇರಿದಂತೆ ಇನ್ನೂ ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬಿನ ದರ ಕಡಿಮೆ ಕೊಡುತ್ತಿವೆ. ರೈತರು ಬೆಳೆದ ಕಬ್ಬಿಗೆ ಬಸವೇಶ್ವರ ಹಾಗೂ ನಂದಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2750 ರೂ. ನೀಡುತ್ತಿವೆ. ಆದರೆ, ಇನ್ನೂಳಿದ ಜಮಖಂಡಿ ಸಕ್ಕರೆ ಕಾರ್ಖಾನೆ ಹಾಗೂ ರೇಣುಕಾ, ಮನಾಲಿ, ಭೀಮಶಂಕರ ಸಕ್ಕರೆ ಕಾರ್ಖಾನೆ, ಕೆಪಿಆರ್ ಹಾಗೂ ದೇವನೂರ ಸಕ್ಕರೆ ಕಾರ್ಖಾನೆ ಪ್ರತಿ ಟನ್‌ಗೆ 2350 ರೂ. ಗಳಂತೆ ದರ ನಿಗದಿಪಡಿಸಿದ್ದಾರೆ. ಇದರಿಂದ ಕಬ್ಬು ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಬ್ಬು ಬೆಳೆಯಬೇಕಾದರೆ ಅದಕ್ಕೆ ತಗಲುವ ಖರ್ಚು ವೆಚ್ಚಗಳ ಲೆಕ್ಕ ಹಾಕಿದರೆ ಈ ದರ ರೈತರಿಗೆ ಯಾವುದಕ್ಕೂ ಅಲ್ಲ. ಬರದಿಂದಾಗಿ ತತ್ತರಿಸಿದ ರೈತರಿಗೆ ಕಡಿಮೆ ದರ ನಿಗದಿಪಡಿಸಿದರೆ, ಮಾಡಿದ ಸಾಲ ತೀರಿಸಲು ಆಗುವುದಿಲ್ಲ. ಸಕ್ಕರೆ ಕಾರ್ಖಾನೆಯವರು ಸಕ್ಕರೆ ತಯಾರಿಸಿದ ನಂತರ ಕಬ್ಬಿನ ಸಿಪ್ಪೆಯಿಂದ ಸಾಕಷ್ಟು ಉತ್ಪನ್ನಗಳನ್ನು ತಯಾರಿಸುವುದರೊಂದಿಗೆ ಸಾಕಷ್ಟು ಲಾಭ ಪಡೆಯುತ್ತಿದ್ದಾರೆ. ಅನ್ನ ಬೆಳೆದು ಕೊಡುವ ಅನ್ನದಾತನಿಗೆ ಸ್ವಲ್ಪ ದರ ಹೆಚ್ಚಿಸಿದರೆ ಕಾರ್ಖಾನೆಯವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಕಡಿಮೆ ದರ ನಿಗದಿಪಡಿಸಿದ ಕಾರ್ಖಾನೆ ಆಡಳಿತ ಮಂಡಳಿ ಮುಖ್ಯಸ್ಥರನ್ನು ಕರೆಯಿಸಿ ಸಭೆ ನಡೆಸಿ ಕಡ್ಡಾಯವಾಗಿ 2750 ರೂ. ದರ ನಿಗದಿಗೊಳಿಸಲು ಸೂಚಿಸಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳು ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಮುಖಂಡರಾದ ಅರವಿಂದ ಕುಲಕರ್ಣಿ, ಸುರೇಖಾ ರಜಪೂತ, ಶ್ರೀಶೈಲ ದೊಡಮನಿ, ನಿಂಗಪ್ಪ ಪೂಜಾರಿ, ಮಹಾದೇವ ಹೂಗಾರ, ಯಮನೂರಿ ಹೂಗಾರ, ಬಸಪ್ಪ ದಾರಬಾವಿ, ಸಿದ್ರಾಮ ಬಂಗಾರಿ, ರಾಜು ರಣದೇವಿ, ಶ್ರೀಮಂತ ಕಾಪಸೆ ಮತ್ತಿತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts