ವಿಜಯಪುರ: ಸರ್ಕಾರದಿಂದ ಅಭಿವೃದ್ಧಿಗಾಗಿ ಸಾಕಷ್ಟು ಹಣ ಬಿಡುಗಡೆಯಾಗಿದ್ದು, ನಗರದಲ್ಲೆಲ್ಲ ಅಭಿವೃದ್ಧಿ ಕಾರ್ಯಗಳು ತ್ವರಿತ ಗತಿಯಲ್ಲಿ ನಡೆಯುತ್ತಿವೆ. ಹೀಗೆ ಹಣ ಬಿಡುಗಡೆಯಾದಂತೆಲ್ಲ ಮತ್ತಷ್ಟು ಅಭಿವದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪ ಬಳಿ ಲೋಕೋಪಯೋಗಿ ಇಲಾಖೆಯ ‘ಅಪೆಂಡಿಕ್ಷ್ ಯೋಜನೆಯಡಿ 3.50 ಕೋಟಿ ರೂ. ವೆಚ್ಚದಲ್ಲಿ ಸೆಟ್ಲೈಟ್ ಬಸ್ ನಿಲ್ದಾಣದಿಂದ (ವರ್ಕ್ಶಾಪ್ದಿಂದ- ಯತ್ನಾಳ ರಸ್ತೆವರೆಗೆ) ದರ್ಗಾ ಕೂಡುವ ರಸ್ತೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮಣ ಜಾಧವ, ವಿಕ್ರಂ ಗಾಯಕವಾಡ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಸುರೇಶ ಜಾಧವ, ಪ್ರಕಾಶ ಚವಾಣ್, ಉಮೇಶ ವಂದಾಲ ದಾದಾಸಾಹೇಬ ಬಾಗಾಯತ್, ವಿವೇಕ ತಾವರಗೇರಿ, ಪಾಂಡುಸಾಹುಕಾರ ದೊಡ್ಡಮನಿ, ಬಸವರಾಜ ಗೊಳಸಂಗಿ, ನಾಗರಾಜ ಮುಳವಾಡ, ರಾಜಶೇಖರ ಭಜಂತ್ರಿ, ಮಲ್ಲಮ್ಮ ಜೋಗುರ ಸೆರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ದೇಶದಿಂದ ಗಡಿಪಾರು ಮಾಡಬೇಕು. ಕರ್ನಾಟಕ ನೆಲದಲ್ಲಿ ಅನ್ನ, ನೀರು ಸೇವಿಸಿ, ಇಲ್ಲಿನ ಶಿಕ್ಷಣ ಪಡೆದು ಪಾಕ್ಪರ ಘೋಷಣೆ ಕೂಗುವವರನ್ನು ಪಾಕಿಸ್ತಾನದ ಬಾರ್ಡರ್ನಲ್ಲಿ ಬಿಟ್ಟುಬರಬೇಕು. ಇಂತಹ ದೇಶದ್ರೋಹಿಗಳಿಗೆ ದೇಶದಲ್ಲಿ ಶಿಕ್ಷಣ ಸೌಲಭ್ಯ ನೀಡದೇ ಅವರ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
ಬಸನಗೌಡ ಪಾಟೀಲ ಯತ್ನಾಳ, ಶಾಸಕರು, ವಿಜಯಪುರ