ವಿಜಯಪುರ: ಜಿಲ್ಲೆಯಲ್ಲಿ ನಕಲಿ ಪತ್ರಕರ್ತರು ಹಾಗೂ ಸಂಘಟನೆಗಳ ಮುಖಂಡರು ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದು ದುರುದ್ದೇಶಪೂರಿತವಾಗಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇಂಥ ಅನಗತ್ಯ ಕಿರುಕುಳ ತಪ್ಪಿಸಿ ನೌಕರರ ಆತ್ಮಸ್ಥೈರ್ಯ ಹೆಚ್ಚಿಸಬೇಕೆಂದು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ವಿಭಾಗ ಹಾಗೂ ಉಪ ವಿಭಾಗದ ಸಿಬ್ಬಂದಿ ಶುಕ್ರವಾರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಅನಧಿಕೃತ ಪತ್ರಕರ್ತರ ಹಾಗೂ ಸಂಘಟನೆಗಳ ಮುಖಂಡರ ಹಾವಳಿ ಹೆಚ್ಚಾಗುತ್ತಿದೆ. ಕಚೇರಿ ಕೆಲಸದಲ್ಲಿ ಹಸ್ತಕ್ಷೇಪ ಮಾಡಿ ಕಾರ್ಯನಿರ್ವಹಿಸಲು ಆಗದಂತಹ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಸರ್ಕಾರದ ನಿರ್ಧಾರ ಮತ್ತು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ವಿಳಂಬವಾಗುತ್ತಿದೆ. ಮಾನಸಿಕ ಹಿಂಸೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಂತಹ ಒಂದು ಪ್ರಕರಣದ ಭಾಗವಾಗಿ ಮಾ. 19 ರಂದು ಡಾ. ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಾಘೂ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಎಂದು ಹೇಳಿಕೊಂಡು ಕೆಲವರು ಕಾಮಗಾರಿ ಕುರಿತು ವಿಚಾರಿಸಿದರು. ಸಮರ್ಪಕ ಮಾಹಿತಿ ನೀಡಲು ಒಪ್ಪಿ ಅವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿದರೂ ಕಾರ್ಯನಿರ್ವಾಹಕ ಅಭಿಯಂತರ ಬಿ.ಬಿ. ಪಾಟೀಲ ಅವರ ವಿರುದ್ಧು ಶಿಸ್ತುಕ್ರಮಕ್ಕೆ ಆಗ್ರಹಿಸಿದ್ದು ಖೇದಕರ. ಇಂಥ ಪ್ರಕರಣಗಳ ಸತ್ಯಾಸತ್ಯತೆ ಪರಿಶೀಲಿಸಿ ಮುಂಬರುವ ದಿನಗಳಲ್ಲಿ ಇಂತಹ ಅನಗತ್ಯ ಕಿರುಕುಳ ತಪ್ಪಿಸಿ ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವುದರೊಂದಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಮನವಿ ಮಾಡಿದರು.
ಇಲಾಖೆ ಸಿಬ್ಬಂದಿಯಾದ ಡಿ.ಬಿ. ಕಲಬುರ್ಗಿ, ಎಸ್.ಎಸ್. ಕೊಳಗೇರಿ, ಎ.ಜಿ. ಗುಜರಿ, ಎಂ.ಎಂ. ಸಜವಾಡ, ಬಿ.ಜಿ. ಬಿರಾದಾರ. ಎ. ಕೆ. ಬಿರಾದಾರ, ಅಶೋಕ ಬಿರಾದಾರ, ಎಂ.ಬಿ. ಪಾಟೀಲ, ಎಸ್.ಜಿ. ದೊಡಮನಿ, ಡಿ.ಎಸ್. ಮಸಳಿ, ಎ.ಎಸ್. ಕಾಖಂಡಕಿ, ಜೆ.ವಿ. ಹೊಮಯ, ಎಸ್.ಪಿ. ಪಾಟೀಲ, ಆರ್.ಎಂ. ದೇಸಾಯಿ, ಬಿ.ಸಿ. ದಳವಾಯಿ. ಆರ್.ಎಲ್. ಉಪ್ಪಾರ, ಎಚ್.ಎಂ. ಪಾಟೀಲ, ಪಿ.ಬಿ. ಪಾಟೀಲ, ಜಿ.ಸಿ. ವಂದಾಲ, ಎಸ್.ಎಸ್. ದತ್ತವಾಡ ಮತ್ತಿತರರಿದ್ದರು.