ವಿಜಯಪುರ: ಭದ್ರಾವತಿಯಲ್ಲಿ ನಗರಸಭೆ ಪೌರಕಾರ್ಮಿಕ ಕೆ.ಸುನೀಲ ಕೊಲೆ ಪ್ರಕರಣ ಖಂಡಿಸಿ ಶುಕ್ರವಾರ ನಗರದ ವಿವಿಧೆಡೆ ಕೆಲಸದ ಸ್ಥಳದಲ್ಲಿಯೇ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪೌರಕಾರ್ಮಿಕರು, ಕೆ.ಸುನೀಲ ಅನ್ವರ್ ಕಾಲನಿಯಲ್ಲಿ ಮಾಸ್ಕ್ ಧರಿಸುವಂತೆ ನಾಗರಿಕರಿಗೆ ತಿಳಿ ಹೇಳುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸಹೋದ್ಯೋಗಿ ಶ್ರೀಕಂಠನ ಮೇಲೂ ಹಲ್ಲೆ ನಡೆದಿದೆ. ಸುನೀಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಇವರ ಸಾವಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದರು.
ಸರ್ಕಾರ ಪೌರಕಾರ್ಮಿಕರನ್ನು ‘ಫ್ರಂಟ್ಲೈನ್ ವಾರಿಯರ್ಸ್’ ಎಂದು ಘೋಷಿಸಿದೆ. ಆದರೆ, ಈ ವಾರಿಯರ್ಸ್ಗೆ ಯಾವುದೇ ಜೀವನ ಭದ್ರತೆ ಇಲ್ಲ. ಹೀಗಾಗಿ ಸರ್ಕಾರ ಕರೊನಾ ವಾರಿಯರ್ಸ್ಗೆ ಭದ್ರತೆ ಒದಗಿಸಬೇಕು. ಮತ್ತು ಸುನೀಲ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗೂ ಕುಟುಂಬ ಸದಸ್ಯನಿಗೆ ಅನುಕಂಪ ಆಧಾರಿತ ನೌಕರಿ ಕೊಡಿಸಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಹಂದ್ರಾಳ, ಪೌರಕಾರ್ಮಿಕರಾದ ದಯಾನಂದ ಅಲಿಯಾಬಾದ, ಶಿವಶಂಕರ ಕಟಕೆ, ಗೋವಿಂದ ಕನ್ನೂರ, ಶೆಟ್ಟೆವ್ವ ಲಂಬು, ನೀಲಮ್ಮ ಮೂಲಿಮನಿ, ಯಲ್ಲವ್ವ ಅಕ್ಕಲಕೋಟ, ಹನುಮಂತ ಗೊಲ್ಲರ ಮತ್ತಿತರರಿದ್ದರು.