| ಪರಶುರಾಮ ಭಾಸಗಿ ವಿಜಯಪುರ
ಐತಿಹಾಸಿಕ ಜಿಲ್ಲೆಯ ಬಹುದಿನದ ಬೇಡಿಕೆಯಾದ ವಿಮಾನ ನಿಲ್ದಾಣ ಕಾಮಗಾರಿಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಶಂಕುಸ್ಥಾಪನೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಜಿಲ್ಲಾಡಳಿತ ಸಿಎಂ ಅಣತಿಗಾಗಿ ಎದುರು ನೋಡುತ್ತಿದೆ. ಈಗಾಗಲೇ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಡಿಗಲ್ಲು ಸಮಾರಂಭ ನೆರವೇರುತ್ತಿದ್ದಂತೆ ಕಾಮಗಾರಿ ಚುರುಕು ಪಡೆಯಲಿದೆ.
ಸ್ಥಳೀಯ ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಎಸ್. ಆಲೂರ ಗುತ್ತಿಗೆ ಜವಾಬ್ದಾರಿ ಹೊತ್ತಿದ್ದು, ಕಾಮಗಾರಿ ಪೂರ್ಣಗೊಳಿಸಲು ವರ್ಷದ ಕಾಲಾವಧಿ ನೀಡಲಾಗಿದೆ. ಯೋಜನೆಯ ವಿಸõತ ವರದಿ ಸಿದ್ಧಪಡಿಸಲು ಕೇಂದ್ರ ಸರ್ಕಾರ ಸ್ವಾಮ್ಯದ ಮೆ.ರೈಟ್ಸ್ ಕಂಪನಿಯನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಯಡಿಯೂರಪ್ಪ ಅವರಿಂದ ದಿನಾಂಕ ಪಡೆಯಲು ಯತ್ನಿಸುತ್ತಿದ್ದು, ತಿಂಗಳಾಂತ್ಯಕ್ಕೆ ಶಂಕು ಸ್ಥಾಪನೆ ನೆರವೇರುವ ಎಲ್ಲ ಸಾಧ್ಯತೆಗಳಿವೆ.
ಎರಡು ಹಂತದ ಕಾಮಗಾರಿ: ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನೆರವೇರಲಿದೆ. ಮೊದಲ ಹಂತದಲ್ಲಿ ರನ್ವೇ, ಟ್ಯಾಕ್ಸಿವೇ ಹಾಗೂ ಏಫ್ರಾನ್ ಒಳಗೊಂಡ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ. ಅದಕ್ಕಾಗಿ 95 ಕೋಟಿ ರೂ.ಅನುದಾನ ನಿಗದಿಪಡಿಸಲಾಗಿದೆ.
ಎರಡನೇ ಹಂತದಲ್ಲಿ ಬಾಕಿ ಉಳಿದ ಕಾಮಗಾರಿಗಳಾದ ಟರ್ವಿುನಲ್ ಕಟ್ಟಡ, ಎಟಿಸಿ, ಪೂರಕ ಕಟ್ಟಡಗಳು, ಏರ್ಸೈಡ್ ಕಾಮಗಾರಿಗಳು ನೆರವೇರಲಿವೆ. ಅದಕ್ಕಾಗಿ 125 ಕೋಟಿ ರೂ.ಮೀಸಲಿಡಲಾಗಿದೆ. ಒಟ್ಟಾರೆ 220 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ.
70 ಪ್ರಯಾಣಿಕರ ಆಸನ ಸಾಮರ್ಥ್ಯ: ಸದ್ಯಕ್ಕೆ 70 ಪ್ರಯಾಣಿಕರ ಆಸನ ಸಾಮರ್ಥ್ಯ ಹೊಂದಿರುವ ಎಟಿಆರ್-72 ಮಾದರಿಯ ವಿಮಾನಗಳ ಕಾರ್ಯಾಚರಣೆಗಾಗಿ ನಿಲ್ದಾಣದ ರೂಪುರೇಷೆ ಸಿದ್ಧಪಡಿಸಲಾಗಿದೆ. ಪ್ರತಿ ಗಂಟೆಗೆ 200 ಪ್ರಯಾಣಿಕರನ್ನು ನಿಭಾಯಿಸಲು ಪ್ರಯಾಣಿಕರ ಟರ್ವಿುನಲ್ ಕಟ್ಟಡ ನಿರ್ವಿುಸಲಾಗುತ್ತಿದೆ. ಹಗಲು ವಾಣಿಜ್ಯ ಕಾರ್ಯಾಚರಣೆಗಾಗಿ ವಿಮಾನ ಬಳಸಲಾಗುತ್ತಿದೆ.ಭವಿಷ್ಯದಲ್ಲಿ ಬೇಡಿಕೆ ಆಧಾರದ ಮೇಲೆ ಬೋಯಿಂಗ್ ಬಿ-737 ಅಥವಾ ಏರ್ಬಸ್ ಎ-320 ಮಾದರಿ ವಿಮಾನಗಳನ್ನು ನಿಭಾಯಿಸಲು ವಿಮಾನ ನಿಲ್ದಾಣದ ವಿಸ್ತರಣೆಗೆ ಬೇಕಾದ ಜಮೀನನ್ನು ಕಾಯ್ದಿರಿಸಲಾಗಿದೆ. ಒಟ್ಟಿನಲ್ಲಿ ದಶಕದ ಬೇಡಿಕೆಯಾದ ವಿಮಾನ ನಿಲ್ದಾಣ ಕಾಮಗಾರಿ ಕೊನೆಗೂ ಆರಂಭಗೊಳ್ಳುತ್ತಿದ್ದು, ಇದರಿಂದ ಸಾಕಷ್ಟು ಉದ್ಯೋಗವಕಾಶ ಸೃಷ್ಟಿಯಾಗುವುದರ ಜತೆಗೆ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಚಟುವಟಿಕೆ ಗಣನೀಯವಾಗಿ ಹೆಚ್ಚಲಿವೆ. ಪ್ರಾದೇಶಿಕ ಅಸಮತೋಲನ ಸರಿದೂಗಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಮೇಲ್ವಿಚಾರಣೆ ಮತ್ತು ಸ್ಥಳ ವಿವರ
ನಗರದಿಂದ 15 ಕಿ.ಮೀ. ಅಂತರದಲ್ಲಿರುವ ಬುರಾಣಪುರ ಹಾಗೂ ಮದಭಾವಿ ಗ್ರಾಮಗಳ ಮಧ್ಯೆ ವಿಮಾನ ನಿಲ್ದಾಣಕ್ಕೆ 727 ಎಕರೆ ಜಮೀನು ಮೀಸಲಿಡಲಾಗಿದೆ. 63.46 ಕೋಟಿ ರೂ. ವೆಚ್ಚದಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ-50ರ ಮೂಲಕ ನಿಲ್ದಾಣ ತಲುಪಬಹುದಾಗಿದೆ. ನಿಲ್ದಾಣ ನಿರ್ಮಾಣ, ಕಾರ್ಯಾಚರಣೆ ಮತ್ತು ಹಣ ಬಿಡುಗಡೆಯ ಕಾರ್ಯವನ್ನು ಕರ್ನಾಟಕ ಸರ್ಕಾರದ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ನೋಡಿಕೊಳ್ಳುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್ಐಐಡಿಸಿ) ನೇತೃತ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಜಿಲ್ಲಾಡಳಿತದ ಅಡಿ ರಾಜ್ಯ ಲೋಕೋಪಯೋಗಿ ಇಲಾಖೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.
ಜನವರಿ 4ರಂದೇ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲಿ ಮುಖ್ಯಮಂತ್ರಿ ಅವರಿಂದ ಶಂಕುಸ್ಥಾಪನೆ ನೆರವೇರಲಿದೆ.
| ಪಿ.ಸುನೀಲ್ಕುಮಾರ್ ಜಿಲ್ಲಾಧಿಕಾರಿ
ಮಗಳನ್ನು ಕೊಂದು ಹೊಲದಲ್ಲಿ ಎಸೆದ ಅಪ್ಪ ಅಮ್ಮ! ಇಷ್ಟಕ್ಕೆಲ್ಲ ಕಾರಣ ಆ ಯುವಕ
ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…