ಬೆಂಗಳೂರು: ಕನ್ನಡದ ಹೆಮ್ಮೆಯ ಗಾಯಕ ವಿಜಯಪ್ರಕಾಶ್ ಇದುವರೆಗೂ ಹಲವು ಗೀತೆಗಳನ್ನು ಹಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ದುನಿಯಾ’ ಎಂಬ ಹಾಡು, ಅವರ ಮಟ್ಟಿಗೆ ವಿಶೇಷ. ಕಾರಣ ಇದೊಂದು ಪ್ರಕೃತಿ ಗೀತೆ. ಈ ಹಾಡನ್ನು ಬಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕರಾದ ಸಲೀಂ-ಸುಲೇಮಾನ್ ಸಂಯೋಜಿಸಿದ್ದು, ಇತ್ತೀಚೆಗೆ ಬಿಡುಗಡೆಯಾಗಿದೆ.
ಇದನ್ನೂ ಓದಿ: ‘ಆಧುನಿಕ ಬಸವಣ್ಣ’ ಡಾ. ಚನ್ನಬಸವ ಪಟ್ಟದೇವರು ಕುರಿತ ‘ಕಲ್ಯಾಣಕುವರ’ ಚಿತ್ರದ ಟ್ರೈಲರ್ ಬಿಡುಗಡೆ
ಸಲೀಂ ಮತ್ತು ಸುಲೇಮಾನ್ ಜೋಡಿ ಪ್ರತೀ ವರ್ಷ ‘ಭೂಮಿ’ ಎಂಬ ಆಲ್ಬಂ ಹೊರತರುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಆಲ್ಬಂನಲ್ಲಿ ಪರಿಸರ ಕಾಳಜಿ ಮೆರೆಯುವ ಹಲವು ಹಾಡುಗಳಿವೆ. ಇದೇ ಶೀರ್ಷಿಕೆಯಡಿ ಪ್ರತೀ ವರ್ಷ ಹಾಡುಗಳು ಮೂಡಿಬರುತ್ತಿದ್ದು, ಈ ಹಾಡುಗಳನ್ನು ದೇಶದ ಜನಪ್ರಿಯ ಗಾಯಕ-ಗಾಯಕಿಯರು ಹಾಡುತ್ತಾ ಬಂದಿದ್ದಾರೆ. ಈ ಬಾರಿಯ ವಿಶೇಷತೆಯೆಂದರೆ, ‘ಭೂಮಿ 2022’ ಆಲ್ಬಂನಲ್ಲಿ ಕನ್ನಡದಲ್ಲೂ ಒಂದು ಹಾಡು ಮೂಡಿಬಂದಿರುವುದು.
‘ದುನಿಯಾ’ ಎಂದು ಶುರುವಾಗುವ ಈ ಹಾಡಿಗೆ ವಿಜಯಪ್ರಕಾಶ್ ಮತ್ತು ಸಲೀಮ್ ಮರ್ಚೆಂಟ್ ಧ್ವನಿಯಾಗಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ರಚಿಸಿರುವ ‘ಉಸಿರಿನ ಮ್ಯಾಲೆ, ಹಸಿರಿನ ಮ್ಯಾಲೆ ಪರಪಂಚ … ಕಲ್ಲುಗಳ ಮ್ಯಾಲೆ ಮಣ್ಣುಗಳ ಮ್ಯಾಲೆ ಪರಪಂಚ … ಗಾಳಿಯಾಗೇ ಭೂಮಿ ನಿಂತೈತೆ ಸೋಜಿಗ ನೋಡೋ … ಭೂಮಿಯಾಗೆ ಎಲ್ಲ ತುಂಬೈತೆ …’ ಎಂದು ಸಾಗುವ ಈ ಹಾಡಿನ ರಿದಮ್ ವಿಭಾಗದ ಉಸ್ತುವಾರಿಯನ್ನು ಜನಪ್ರಿಯ ಸಂಗೀತಗಾರ ತೌಫೀಕ್ ಖುರೇಷಿ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ನಾನು ಜೀವಂತ ಇದ್ದೇನೆ, ಮಗ ನನ್ನನ್ನು ಕೊಂದಿಲ್ಲ’ ಎಂದ ಹಿರಿಯ ನಟಿ; ಪೊಲೀಸರಿಗೂ ದೂರು
ಇತ್ತೀಚೆಗೆ ಈ ಹಾಡನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಕೆ. ಸುಧಾಕರ್ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯಪ್ರಕಾಶ್ ಮತ್ತು ಸಲೀಮ್ ಮರ್ಚೆಂಟ್ ಸಹ ಹಾಜರಿದ್ದಾರೆ.