ಬಾಗಲಕೋಟೆ: ನಿಮ್ಮ ಆಶೀರ್ವಾದ ಬೇಕು ಸರ್… ಎನ್ನುತ್ತ ಮಾಜಿ ಸಿಎಂ ಕಾಲಿಗೆ ಬಿದ್ದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ನನಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೊಡಿಸಿ ಎಂದು ಕೋರಿದರು.
ಬಾದಾಮಿಯ ಖಾಸಗಿ ಹೋಟೆಲ್ ಬಳಿ ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಗರ ಜೊತೆ ಕಾಶಪ್ಪನವರ್ ಭೇಟಿ ಮಾಡಿದರು. ಈ ವೇಳೆ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಕಾಶಪ್ಪನವರ್ಗೆ ಕೊಡಿಸಬೇಕು. ನೀವು ಹೇಳಿದ್ರೆ ಆಗುತ್ತೆ ಸರ್ ಎನ್ನುತ್ತ ಅಭಿಮಾನಿಗಳು ಕೈ ಮುಗಿದು ಕೇಳಿಕೊಂಡರು.
ನನ್ನ ಆಶೀರ್ವಾದ ಯಾವಾಗಲೂ ಇರುತ್ತೆ ಎಂದು ಕಾಶಪ್ಪನವರ್ರ ಬೆನ್ನು ತಟ್ಟಿದ ಸಿದ್ದರಾಮಯ್ಯ, ನಾನು ಸಹಕಾರಿ ಕ್ಷೇತ್ರಕ್ಕೆ ಈವರೆಗೂ ಕೈಹಾಕಿಲ್ಲ. ನಾನು ಹೇಳೋದು ಹೇಳ್ತೇನೆ ಎಂದರು.
ನಾನು ಯಾವಾಗಲೂ ಇವನ(ಕಾಶಪ್ಪನವರ್) ಪರವಾಗಿಯೇ ಇರೋದು ಎಂದ ಸಿದ್ದರಾಮಯ್ಯ, ಕಾಶಪ್ಪನವರ್ರ ಬೆಂಬಲಿಗರಿಗೆ ಅಭಯ ನೀಡಿದರು. ಇತ್ತೀಚಿಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಮಬಲ ಹೋರಾಟದಲ್ಲಿ ಕಾಶಪ್ಪನವರ್ರ ಲಾಟರಿ ಮೂಲಕ ರೋಚಕ ಗೆಲುವು ಪಡೆದಿದ್ದರು.