ಶಿವಮೊಗ್ಗ: ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಭಾನುವಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದೇ ಹೆಲಿಕಾಪ್ಟರ್ನಲ್ಲಿ ಬಂದಿಳಿದರು.
ಅರೆ! ಇದೇನಿದು? ರಾಜಕೀಯ ಬದ್ಧ ವೈರಿಗಳು ಒಂದೇ ಹೆಲಿಕಾಪ್ಟರ್ನಲ್ಲಿ ಬಂದಿಳಿದರಾ? ಎಂದು ಅಚ್ಚರಿಪಡಬೇಕಿಲ್ಲ. ಹೆಲಿಕಾಪ್ಟರ್ ಒಂದೇ ಆದರೂ ಬಂದಿಳಿದ ಸಮಯ ಮಾತ್ರ ಬೇರೆ ಬೇರೆ.
ಹೌದು, ತರೀಕೆರೆ ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್ ಪುತ್ರಿಯ ಮದುವೆ ಸಮಾರಂಭ ಶಿವಮೊಗ್ಗದಲ್ಲಿ ಭಾನುವಾರ ನಿಗದಿಯಾಗಿತ್ತು. ಹಾಗಾಗಿ ಸಿದ್ದರಾಮಯ್ಯ ಅವರಿಗೆ ವಿಟಿ-ಎಚ್ಕೆಬಿ ಹೆಸರಿನ ಹೆಲಿಕಾಪ್ಟರ್ಗೆ ಮೊದಲೇ ಬುಕ್ ಆಗಿತ್ತು. ಭಾನುವಾರ ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ಹೊರಡಬೇಕಿತ್ತು.
ಆದರೆ ಭಾನುವಾರ ಬೆಳಗ್ಗೆ ಸಿಎಂ ಯಡಿಯೂರಪ್ಪಗೆ ಶಿವಮೊಗ್ಗಕ್ಕೆ ಬರಲು ಅದೇ ಹೆಲಿಕಾಪ್ಟರನ್ನು ದಿಢೀರ್ ಬುಕ್ ಮಾಡಿದ್ದರಿಂದ ಸಿಎಂ ಅವರನ್ನು ಬೆಳಗ್ಗೆ 8.40ಕ್ಕೆ ಕರೆತಂದ ಹೆಲಿಕಾಪ್ಟರ್ ಮತ್ತೆ ಬೆಂಗಳೂರಿಗೆ ಮರಳಿ ಸಿದ್ದರಾಮಯ್ಯ ಅವರನ್ನು ಮಧ್ಯಾಹ್ನ 12.05ಕ್ಕೆ ಕರೆತಂದಿತು.
ಬಿಎಸ್ವೈ ಭಾನುವಾರ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಲಿದ್ದು, ಹೆಲಿಕಾಪ್ಟರ್ ಮಧ್ಯಾಹ್ನ 3.30ಕ್ಕೆ ಸಿದ್ದರಾಮಯ್ಯ ಅವರನ್ನು ಬದಾಮಿಗೆ ಕರೆದೊಯ್ಯಲಿದೆ. ಸೋಮವಾರ ಬೆಳಗ್ಗೆ 9ಕ್ಕೆ ಶಿವಮೊಗ್ಗಕ್ಕೆ ಅದೇ ಹೆಲಿಕಾಪ್ಟರ್ ಬಂದು ಸಿಎಂ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಿದೆ.