ಹೊಸಪೇಟೆ: ಜಿಲ್ಲೆ ರಚನೆಗಾಗಿಯೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆನಂದ್ಸಿಂಗ್, ಈಗ ವಿಜಯನಗರ ಜಿಲ್ಲೆ ಸಾಮ್ರಾಟ್ ಆಗಿದ್ದಾರೆ. ಹಿಂದು ಸಾಮ್ರಾಜ್ಯ ಮರುಕಳಿಸಲು ನೂತನ ವಿಜಯನಗರ ಜಿಲ್ಲೆ ರಚನೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗ್ರೀನ್ ಸಿಗ್ನಲ್ ನೀಡಿರುವುದು ಸಂತಸ ತಂದಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹೇಳಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಲ್ಕೈದು ತಿಂಗಳ ಹಿಂದೆಯೇ ಹೊಸಜಿಲ್ಲೆ ಘೋಷಣೆ ಆಗಬೇಕಿತ್ತು. ಆದರೆ, ಕೋವಿಡ್ ಸೇರಿ ನಾನಾ ಕಾರಣಗಳಿಂದಾಗಿ ತಡವಾಗಿದೆ. ಕೊಟ್ಟ ಮಾತನ್ನು ಸಿಎಂ ಉಳಿಸಿಕೊಂಡಿದ್ದಾರೆ ಎಂದರು.
ನಮ್ಮವರಲ್ಲಿ ಕೆಲವರು ರಾಜೀನಾಮೆ ಕೊಡಲು ಕಾಲಕ್ಕಾಗಿ ಕಾದಿದ್ದರು. ಆನಂದ್ಸಿಂಗ್ ರಾಜಿನಾಮೆ ಕೊಡಲು ರಾಹುಕಾಲ, ಯಮಗಂಡ, ಗುಳಿಕೆ ಕಾಲವೆಂದು ಕಾಲ ಹರಣ ಮಾಡಲಿಲ್ಲ. ಸ್ವತಂತ್ರವಾಗಿ ತೆರಳಿ ರಾಜೀನಾಮೆ ನೀಡಿ, ಹೊಸಪೇಟೆಯಲ್ಲೆ ಉಳಿದಿದ್ದರು. ನಾವು ದೆಹಲಿಯಲ್ಲಿದ್ದೆವು. ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಜಿ.ಸೋಮಶೇಖರರೆಡ್ಡಿಯನ್ನು ಕರೆದು ಪಕ್ಷದ ವೇದಿಕೆಯಲ್ಲೆ ಮಾತನಾಡಲಿದ್ದೇವೆ ಎಂದರು.
ಪಕ್ಷ ಸೇರಿದ 17 ಜನರಿಗೆ ಬಿಜೆಪಿ ಬಿ ಫಾರಂ ನೀಡಿದೆ. ಗೆದ್ದವರಿಗೆ ಮಂತ್ರಿಸ್ಥಾನಮಾನ ಕೊಟ್ಟಿದ್ದು, ಸೋತವರಿಗೆ ಎಂಎಲ್ಸಿ ಮಾಡಿದ್ದಾರೆ. ಸಿಎಂ ಬಿಎಸ್ವೈ ಕೊಟ್ಟ ಮಾತಿನಂತೆ ನಡೆದಿದ್ದಾರೆ. ಬಿಜೆಪಿಯಲ್ಲಿ ಎರಡು ಟೀಂ ಎನ್ನುವುದಿಲ್ಲ. 117 ಶಾಸಕರು ಒಗ್ಗಟ್ಟಾಗಿದ್ದೇವೆ. ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಹೈಕಮಾಂಡ್ನೊಂದಿಗೆ ಮಾತುಕತೆ ನಡೆಸಿ ಯಾರಿಗೆ ಯಾವ ಸ್ಥಾನಮಾನ ನೀಡಬೇಕೆಂಬುದು ಸಿಎಂ ಪರಮಾಧಿಕಾರ ಎಂದರು.
ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆ ವಿಭಜನೆ ಅನಿವಾರ್ಯ. ಯಾರೂ ಅಪಸ್ವರ ಎತ್ತಬೇಡಿ. ಹೊಸಪೇಟೆಯಲ್ಲಿ ನಡೆಯುತ್ತಿರುವ ಸಹಕಾರ ಸಪ್ತಾಹವು ವಿಜಯನಗರ ಜಿಲ್ಲೆಯ ಉತ್ಸವವಾಗಿದೆ. ಕ್ಯಾಬಿನೆಟ್ ವಿಸ್ತರಣೆಯಲ್ಲಿ ಯಾರನ್ನು ಯಾವಾಗ ಮಂತ್ರಿಗಳನ್ನು ಮಾಡಬೇಕೆಂಬುದು ಸಿಎಂ ತೀರ್ಮಾನಿಸಲಿದ್ದಾರೆ. ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರು ಎಂಬ ಪ್ರಶ್ನೆಯೇ ಇಲ್ಲ. ಎಲ್ಲರೂ ಗೌರವ ಹಾಗೂ ಅಣ್ಣತಮ್ಮಂದಿರಂತೆ ಇದ್ದೇವೆ.
| ಬಿ.ಸಿ.ಪಾಟೀಲ್, ಕೃಷಿ ಸಚಿವ