ನವದೆಹಲಿ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ಸಂಭವಿಸಿದ ರೈತ ಪ್ರತಿಭಟನಾಕಾರರ ಸಾವು ಅಪಘಾತವಾಗಿರಲಿಲ್ಲ, ಬದಲಿಗೆ ರಸ್ತೆಯಲ್ಲಿ ಶಾಂತವಾಗಿ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿದಿತ್ತು ಎಂಬ ಆರೋಪವನ್ನು ಸಮರ್ಥಿಸುವ ಉತ್ತಮ ಗುಣಮಟ್ಟದ ವಿಡಿಯೋ ಒಂದು ಇದೀಗ ಬೆಳಕಿಗೆ ಬಂದಿದೆ. ಬಿಜೆಪಿ ಸಂಸದರೇ ಆಗಿರುವ ವರುಣ್ ಗಾಂಧಿ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲಖೀಂಪುರದಲ್ಲಿ ಅ.3 ರಂದು ನಡೆದ ಈ ಘಟನಾವಳಿಯಲ್ಲಿ ಪ್ರತಿಭಟನಾಕಾರರ ಮೇಲೆ ಕಾರು ಓಡಿಸಿದ್ದರಿಂದ ರೈತರು ಮೃತಪಟ್ಟರು. ಅದರಿಂದ ಕುಪಿತಗೊಂಡ ಪ್ರತಿಭಟನಾಕಾರರು ಕಾರಿನಲ್ಲಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಚಾಲಕನನ್ನು ಥಳಿಸಿ ಕೊಂದು ಕಾರಿಗೆ ಬೆಂಕಿ ಹಚ್ಚಿದರು ಎಂದು ರೈತನಾಯಕರು ಆರೋಪಿಸಿದ್ದಾರೆ. ಆದರೆ, ರೈತರ ಮೇಲೆ ಹರಿದ ಕಾರಿನ ಒಡೆಯರಾದ ಕೇಂದ್ರ ಸಚಿವ ಅಜಯ್ ಮಿಶ್ರಾರ ಮಗ ಆಶಿಶ್ ಮಿಶ್ರ, ಪ್ರತಿಭಟನಾಕಾರರು ಚಾಲಕನ ಮೇಲೆ ಕಲ್ಲೆಸೆದ ಕಾರಣ ಸಮತೋಲನ ತಪ್ಪಿ ಕಾರು ತಿರುಗಿಕೊಂಡು ನೆರೆದಿದ್ದ ಜನರ ಮೇಲೆ ಹಾದುಹೋಯಿತು ಎಂದು ವಾದಿಸುತ್ತಿದ್ದಾರೆ.
The video is crystal clear. Protestors cannot be silenced through murder. There has to be accountability for the innocent blood of farmers that has been spilled and justice must be delivered before a message of arrogance and cruelty enters the minds of every farmer. 🙏🏻🙏🏻 pic.twitter.com/Z6NLCfuujK
— Varun Gandhi (@varungandhi80) October 7, 2021
ಆದರೆ, ವರುಣ್ ಗಾಂಧಿ ಅವರು ಇಂದು(ಅ.7) ಶೇರ್ ಮಾಡಿರುವ ವಿಡಿಯೋದಲ್ಲಿ ಪ್ರತಿಭಟನಾಕಾರರು ರಸ್ತೆಯ ನಡುವಿನಲ್ಲಿ ಸುಮ್ಮನೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕಪ್ಪು ಬಣ್ಣದ ಕಾರು ಅವರಿಗೆ ಡಿಕ್ಕಿ ಹೊಡೆದು ಹಾದುಹೋಗುವುದು ಕಾಣುತ್ತದೆ. ಆ ಕಾರಿನ ಹಿಂದೆಯೇ ಇನ್ನೆರಡು ಕಾರುಗಳು ಏನೂ ನಡೆದಿಲ್ಲವೆಂಬಂತೆ ಹಾದುಹೋಗುತ್ತವೆ.
“ವಿಡಿಯೋ ಸುಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆ ಮಾಡಿ ಮೌನವಾಗಿಸಲು ಸಾಧ್ಯವಿಲ್ಲ. ಹರಿದಿರುವ ರೈತರ ಮುಗ್ಧ ರಕ್ತಕ್ಕೆ ಹೊಣೆಗಾರಿಕೆಯನ್ನು ನಿಗದಿ ಮಾಡಬೇಕು. ರೈತರ ಮನಸ್ಸಿಗೆ ದರ್ಪ ಮತ್ತು ಕ್ರೌರ್ಯದ ಸಂದೇಶ ಮುಟ್ಟುವ ಮುನ್ನ ನ್ಯಾಯವನ್ನು ಒದಗಿಸಬೇಕು” ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಯುಪಿ ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. ನಾಲ್ಕು ಜನ ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದು, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. (ಏಜೆನ್ಸೀಸ್)
ಚಾರ್ ಧಾಮ್ ಯಾತ್ರೆಗೆ ಸಂಪೂರ್ಣ ತೆರೆದ ಬಾಗಿಲು; ಯಾತ್ರಾರ್ಥಿಗಳಿಗೆ ಈ ದಾಖಲಾತಿಗಳು ಅಗತ್ಯ
ತುಂಬಾ ಹೊತ್ತು ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುತ್ತೀರಾ? ಹಾಗಿದ್ರೆ, ಈ ಉಪಯುಕ್ತ ಆಸನಗಳನ್ನು ಮಾಡಿ