ಕುಂದಾಪುರ: ಇಲ್ಲಿನ ಪುರಸಭೆ 9ನೇ ಅವಧಿಗೆ ಅಧ್ಯಕ್ಷರಾಗಿ ವೀಣಾ ಭಾಸ್ಕರ್ ಹಾಗೂ ಉಪಾಧ್ಯಕ್ಷರಾಗಿ ಸಂದೀಪ ಖಾರ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಟಿಟಿ ವಾರ್ಡ್ ಸದಸ್ಯೆ ವೀಣಾ ಭಾಸ್ಕರ್ ಅಧ್ಯಕ್ಷೆ ಹಾಗೂ ಬಾದುಷಾ ವಾರ್ಡ್ ಸದಸ್ಯ ಸಂದೀಪ ಖಾರ್ವಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ಮೋಹನ್ದಾಸ್ ಶೆಣೈ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂತೋಷ್ ಶೆಟ್ಟಿ ಸೂಚಕರಾಗಿದ್ದರು. ಕುಂದಾಪುರ ತಹಸೀಲ್ದಾರ್ ಆನಂದಪ್ಪ ನಾಯಕ್ ಘೋಷಣೆ ಮಾಡಿದರು.
2018ರಲ್ಲಿ ಪುರಸಭೆಯ 23 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ 14 ವಾರ್ಡ್ಗಳಲ್ಲಿ ಬಿಜೆಪಿ, 8 ವಾರ್ಡ್ಗಳಲ್ಲಿ ಕಾಂಗ್ರೆಸ್ ಹಾಗೂ ಒಂದು ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಗೊಂದಲ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದಾಗಿ 2 ವರ್ಷಗಳ ನಂತರ ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಹಾಗೂ ಹಿಂದುಳಿದ ವರ್ಗ ಎ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ಗಜೆಟ್ ಪ್ರಕಟಣೆ ಹೊರಡಿಸಲಾಗಿತ್ತು.