ವಿಜಯಪುರ: ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಎಸ್ಎಸ್ ಪಪೂ ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ವೇದಾಂತನಿಗೆ ಸನ್ಮಾನಿಸಿದ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ಮಾತನಾಡಿ, ಅತ್ಯಂತ ಕಡು ಬಡತನದಲ್ಲಿ ಬಿಸಿಎಂ ವಸತಿ ನಿಲಯದಲ್ಲಿ ಉಳಿದುಕೊಂಡು ಕಠಿಣ ಪರಿಶ್ರಮದಿಂದ 596 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ವೇದಾಂತ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ವೇದಾಂತನ ಕಲಿಕೆಗೆ ಸಹಕರಿಸಿದ ಕಾಲೇಜಿನ ಪ್ರಾಚಾರ್ಯ, ಸಿಬ್ಬಂದಿಗೂ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ ಹೊಸಮನಿಗೂ ಅಭಿನಂದಿಸುವುದಾಗಿ ತಿಳಿಸಿದರು.
ಜುಬೇರ ಕೆರೂರ ಮಾತನಾಡಿ, ವಿಜಯಪುರ ಜಿಲ್ಲೆ ಕಳೆದ ಸಾಲಿನಲ್ಲಿ ಶೇ.84ಪ್ರತಿಶತ ಫಲಿತಾಂಶದೊಂದಿಗೆ ರಾಜ್ಯಕ್ಕೆ 5 ನೇ ಸ್ಥಾನದಲ್ಲಿತ್ತು. ಈ ಸಲ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವುದರೊಂದಿಗೆ ಶೇ.94ರಷ್ಟು ಸಾಧನೆ ಮೆರೆದು ಜಿಲ್ಲೆಯನ್ನು 3 ನೇ ಸ್ಥಾನಕ್ಕೆ ಏರಿಸಿದ್ದಾರೆ. ಎಲ್ಲ ಸಾಧಕರಿಗೂ ಅಭಿನಂದಿಸುವುದಾಗಿ ತಿಳಿಸಿದರು.
ವಿಜಯಕುಮಾರ ಹತ್ತಿ, ರಾಜಶೇಖರ ದೈವಾಡಿ, ಗಂಗಾಧರ ಜೇವೂರ, ಪ್ರಕಾಶ ಗೊಂಗಡಿ, ನಿಜು ಮೇಲಿನಕೇರಿ, ಬಿ.ಬಿ. ಪಾಟೀಲ, ನಾಗೇಶ ಹರೋಲಿ ಮತ್ತಿತರರಿದ್ದರು.