ಬೆಂಗಳೂರು: ಹಳ್ಳಿ ಕಾರ್ ತಳಿಯ ಹಸುಗಳ ಸಂರಕ್ಷಣೆಯನ್ನು ತೊಡಗಿಸಿಕೊಂಡು ಹಳ್ಳಿ ಕಾರ್ ಎಂದೇ ಗುರುತಿಸಿಕೊಂಡಿರುವ ಕನ್ನಡ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್, ಕಳೆದ ಒಂದು ತಿಂಗಳ ಹಿಂದೆ ಹುಲಿ ಉಗುರಿನ ಲಾಕೆಟ್ ಪ್ರಕರಣದಲ್ಲಿ ಜೈಲು ಸೇರಿ ಮತ್ತೆ ಬಿಗ್ಬಾಸ್ ಮನೆ ಪ್ರವೇಶಿಸಿದ ಸಂಗತಿ ಇಡೀ ರಾಜ್ಯಕ್ಕೆ ತಿಳಿದಿದೆ.
ಹುಲಿ ಉಗುರು ಪ್ರಕರಣದ ನಡುವೆಯೇ ವರ್ತೂರ್ ಸಂತೋಷ್ ಅವರ ವೈವಾಹಿಕ ಜೀವನವು ಸಹ ಮುನ್ನೆಲೆಗೆ ಬಂದಿತು. ಸಂತೋಷ್ಗೆ ಮದುವೆಯಾಗಿದೆ, ಅದನ್ನು ಮುಚ್ಚಿಡುತ್ತಿದ್ದಾನೆ, ಆತನೊಬ್ಬ ಪತ್ನಿ ಪೀಡಕ, ಪತ್ನಿಗೆ ಮೋಸ ಮಾಡಿದ್ದಾನೆ ಮತ್ತು ಆತ ಮಾದಕ ವ್ಯಸನಿಯಾಗಿದ್ದ ಅಂತೆಲ್ಲಾ ಆರೋಪಗಳು ಕೇಳಿಬಂದವು. ಅಲ್ಲದೆ, ಎಂಗೇಜ್ಮೆಂಟ್ ಮತ್ತು ಮದುವೆ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.
ವೈರಲ್ ವಿಡಿಯೋ ನೋಡಿದವರು ಸಂತೋಷ್ನನ್ನು ಬೈದುಕೊಂಡಿದ್ದು ಉಂಟು. ಹಾಗೇ ಕೆಲವರು ಸಂತೋಷ್ ಪರ ಬ್ಯಾಟ್ ಬೀಸಿದ್ದು ಉಂಟು. ಆದರೆ, ಈ ಎಲ್ಲ ಆರೋಪಗಳಿಗೆ ಸಂತೋಷ್ ಏನು ಉತ್ತರ ಕೊಡುತ್ತಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗ ತೊಡಗಿತು. ಮೊದಲೇ ಹುಲಿ ಉಗುರಿನ ಪ್ರಕರಣದಲ್ಲಿ ನೊಂದಿದ್ದ ಸಂತೋಷ್ಗೆ ಮದುವೆ ವಿವಾದ ಇನ್ನಷ್ಟು ನೋವುಂಟು ಮಾಡಿತು. ಇದರ ನಡುವೆ ಬಿಗ್ಬಾಸ್ ಮನೆಗೆ ಮತ್ತೆ ಪ್ರವೇಶ ಮಾಡಿದ್ದ ಸಂತೋಷ್, ಒಂದು ಹಂತದಲ್ಲಿ ನಾನು ಬಿಗ್ಬಾಸ್ ಮುಂದುವರಿಸುವುದಿಲ್ಲ, ನನ್ನನ್ನು ಮನೆ ಕಳುಹಿಸಿಬಿಡಿ ಎಂದು ಪಟ್ಟು ಹಿಡಿದು ಕುಳಿತುಬಿಟ್ಟಿದ್ದ. ಸ್ವತಃ ಸುದೀಪ್ ಬಂದು ಹೇಳಿದರೂ ಸಂತೋಷ್ ಮನಸ್ಸು ಬದಲಿಸಿರಲಿಲ್ಲ. ಕೊನೆಗೆ ಸಂತೋಷ್ನನ್ನು ಸಮಾಧಾನ ಮಾಡಲು ಆತನ ತಾಯಿಯೇ ಬರಬೇಕಾಯಿತು. ಅಂತಿಮವಾಗಿ ಮನೆಯಲ್ಲಿ ಇರಲು ಸಂತೋಷ್ ಒಪ್ಪಿಕೊಂಡರು. ಈ ಸಮಯದಲ್ಲೂ ಸಂತೋಷ್ ನಾಟಕವಾಡುತ್ತಿದ್ದಾರೆ ಎಂದು ಕೆಲವರು ಹೇಳಿದರು.
ಹುಲಿ ಉಗುರು ಪ್ರಕರಣ ಬಳಿಕ ವೈವಾಹಿಕ ಜೀವನದ ಕುರಿತು ಎದ್ದಿದ್ದ ವಿವಾದ ಇದೀಗ ತಣ್ಣಗಾಗಿದೆ. ಆದರೆ, ಇದೀಗ ಸಂತೋಷ್ ಹೇಳಿಕೆಯಿಂದ ಮತ್ತೊಂದು ಸುತ್ತಿನ ವೈವಾಹಿಕ ಜೀವನದ ಚರ್ಚೆ ಜೋರಾಗುವ ಸಾಧ್ಯತೆ ಇದೆ. ಕಲರ್ಸ್ ಕನ್ನಡ ವಾಹಿನಿ ಎಂದಿನಂತೆ ಇಂದಿನ ಎಪಿಸೋಡ್ನ ಪ್ರೋಮೋವನ್ನು ತನ್ನ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಪೋಸ್ಟ್ ಮಾಡಿದೆ. ಪ್ರೋಮೋಗೆ ವರ್ತೂರ್ ಸಂತೋಷ್ ಬಾಯಲ್ಲೇ ಅವರ ಮದುವೆ ಕತೆ ಕೇಳಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ವಿಡಿಯೋದಲ್ಲಿ ಸಂತೋಷ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.
ಸಂತೋಷ್ ಹೇಳಿದ್ದೇನು ಎಂಬುದನ್ನು ನೋಡುವುದಾದರೆ, ವರ್ತೂರ್ ಸಂತೋಷ್ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ಹೇಳುತ್ತಿದ್ದೇನೆ. ನೀನು ಇಂಥವರಿಗೆ ತಾಳಿ ಕಟ್ಟು ಅಂದರೆ, ಅಥವರಿಗೆ ನಾನು ತಾಳಿ ಕಟ್ಟುತ್ತೇನೆ ಎಂದು ನಾನು ನನ್ನ ದೊಡ್ಡಪ್ಪನಿಗೆ ಹೇಳಿದ್ದೆ. ನಾನು ಮಾತು ಕೊಟ್ಟಂತೆ ಒಪ್ಪಿಕೊಂಡೆ ಮತ್ತು ನಡೆದುಕೊಂಡೆ. ಆದರೆ, ಮನೆಗೆ ಬಂದವಳು ನನ್ನ ತಾಯಿಯನ್ನು ನಿರ್ಲಕ್ಷಿಸಲು ಶುರು ಮಾಡಿದಳು. ನಾನು ಸಂಪಾದನೆ ಮಾಡಿದ ಜನರನ್ನು ಬಿಟ್ಟು ಇವರ ಹಿಂದೆ ಹೋಗಬೇಕೆಂದರೆ ಅದು ಸಾಧ್ಯಾನೇ ಇಲ್ಲ. ಮನೆ ಬಿಟ್ಟು ಹೋದವಳನ್ನು ಕರೆದುಕೊಂಡು ಬರಲು ನಾನು ಆಕೆಯ ಮನೆಗೆ ಹೋದೆ ನನ್ನ ಮಾತಿನಂತೆ ನನ್ನ ಜತೆ ಬಂದರೆ, ಇಂದಿಗೂ ನೀನು ರಾಣಿಯೇ. ನಿನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ ಬಾ ಎಂದು ಕರೆದೆ. ಆದರೆ, ಅವರು ನನ್ನನ್ನು ಗೇಟ್ನಿಂದ ಆಚೆ ಹೋಗು ಎಂದರು. ಅಂದು ನಾನು ಮಾತು ಕೊಟ್ಟು ಬಂದಿದ್ದೆ. ಅದರಂತೆ ನಾನಿಂದು ನನ್ನ ಮಾತಿನ ಮೇಲೆ ನಿಂತಿದ್ದೇನೆ ಎಂದು ವರ್ತೂರ್ ಸಂತೋಷ್ ಹೇಳಿದ್ದಾರೆ.
ಇದಿಷ್ಟು ಪ್ರೋಮೋದಲ್ಲಿರುವ ಮಾತುಗಳಷ್ಟೇ, ತಮ್ಮ ವೈವಾಹಿಕ ಜೀವನದ ಬಗ್ಗೆ ಸಂತೋಷ್ ತುಂಬಾ ಮಾತನಾಡಿದ್ದು, ಅದನ್ನು ವೀಕ್ಷಿಸಲು ಬಯಸಿದರೆ ನೀವು ಇಂದಿನ ಎಪಿಸೋಡ್ವರೆಗೂ ಕಾಯಬೇಕಿದೆ. ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.
ಬಿಗ್ ಬಾಸ್ ವಿನ್ನರ್ ಯಾರು ಎಂದು ಆರ್ಯವರ್ಧನ್ ಭವಿಷ್ಯ…ವರ್ತೂರ್ ಸಂತೋಷ್ ಈ ಬಾರಿಯ ವಿನ್ನರ್ ಆಗೋದು ಖಚಿತ..!