ಬೆಂಗಳೂರು: ರಾಜ್ಯದಲ್ಲಿ ಕ್ರಿಕೆಟ್ ಚಟುವಟಿಕೆ ಪುನರಾರಂಭಕ್ಕೆ ವೇದಿಕೆ ಸಜ್ಜಾಗುತ್ತಿರುವ ನಡುವೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ), ಮುಂಬರುವ ಟೂರ್ನಿಗಳಲ್ಲಿ ಆಡಲು ಬಯಸುವ 18 ವರ್ಷ ಮೇಲ್ಪಟ್ಟ ಎಲ್ಲ ಆಟಗಾರರು ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ವ್ಯಾಕ್ಸಿನ್ನ ಕನಿಷ್ಠ ಒಂದು ಡೋಸ್ ಆದರೂ ಹಾಕಿಸಿಕೊಂಡಿದ್ದರೆ ಮಾತ್ರ ಪಂದ್ಯಗಳನ್ನು ಆಡಲು ಅವಕಾಶ ನೀಡಲಾಗುವುದು ಎಂದು ಕೆಎಸ್ಸಿಎ ಸ್ಪಷ್ಟಪಡಿಸಿದೆ.
ಅಕ್ಟೋಬರ್ 20ರಂದು ರಾಷ್ಟ್ರೀಯ ದೇಶೀಯ ಕ್ರಿಕೆಟ್ ಋತು ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಶನಿವಾರ ಘೋಷಿಸಿದೆ. ಅದಕ್ಕೆ ಮುನ್ನ ಜುಲೈ ಕೊನೇ ವಾರ ಅಥವಾ ಆಗಸ್ಟ್ ಮೊದಲ ವಾರದಿಂದಲೇ ರಾಜ್ಯದ ಮೊದಲ 3 ಡಿವಿಷನ್ ಲೀಗ್ ಪಂದ್ಯಗಳು ನಡೆದರೆ, ಆಗಸ್ಟ್ನಲ್ಲಿ ಟಿ20 ಟೂರ್ನಿ ನಡೆಯಲಿದೆ. ಆಗಸ್ಟ್ ಕೊನೇ ವಾರದಿಂದ 19 ವಯೋಮಿತಿ ಅಂತರ ಕ್ಲಬ್ ಟೂರ್ನಿಯೂ ನಡೆಯಲಿದೆ ಎಂದು ಕೆಎಸ್ಸಿಎ ತಿಳಿಸಿದೆ.
ಕ್ರಿಕೆಟಿಗರಿಗೆ ಲಸಿಕೆ ಹಾಕಲು ಕೆಎಸ್ಸಿಎ ಈಗಾಗಲೆ ವ್ಯಾಕ್ಸಿನೇಷನ್ ಶಿಬಿರಗಳನ್ನೂ ಆಯೋಜಿಸಿದೆ. ಮುಂದಿನ ರಾಜ್ಯ ಕ್ರಿಕೆಟ್ ಋತುವಿನ ವೇಳೆ 18 ವರ್ಷ ಕೆಳಗಿನ ಆಟಗಾರರಿಗೆ ಹಿಂದಿನಂತೆ ಕ್ರಮಬದ್ಧವಾಗಿ ಕೋವಿಡ್ ಟೆಸ್ಟ್ಗಳು ನಡೆಯಲಿವೆ ಎಂದೂ ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ.
ಕಳೆದ ವರ್ಷದಂತೆ ಈ ಸಲವೂ ಕರೊನಾ ಬದಲಿ ಆಟಗಾರ ನಿಯಮ ಮುಂದುವರಿಯಲಿದ್ದು, 11ಕ್ಕಿಂತ ಕಡಿಮೆ ಆಟಗಾರರೊಂದಿಗೆ ಫೀಲ್ಡಿಂಗ್ ಮಾಡುವ ತಂಡಕ್ಕೆ ಅಂಕ ಕಡಿತ ಮಾಡಲಾಗುವುದಿಲ್ಲ. ಕ್ರಿಕೆಟ್ ಪುನರಾರಂಭದ ವೇಳೆ ಎಲ್ಲ ಸರ್ಕಾರದ ಮತ್ತು ಬಿಸಿಸಿಐ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದೂ ಕೆಎಸ್ಸಿಎ ತಿಳಿಸಿದೆ.
11ನೇ ವಿವಾಹ ವಾರ್ಷಿಕೋತ್ಸವದಂದು ಪತ್ನಿಗೆ ವಿಶೇಷ ಉಡುಗೊರೆ ನೀಡಿದ ಧೋನಿ!