ಕಾನಹೊಸಹಳ್ಳಿ: ಉತ್ತರ ಪ್ರದೇಶದಿಂದ ವಾಪಸ್ ಆಗಿರುವ ಗ್ರಾಮದ ವೃದ್ಧೆಯೊಬ್ಬರ ಮನೆಗೆ ಬುಧವಾರ ಭೇಟಿ ನೀಡಿದ ಟಾಸ್ಕ್ಫೋರ್ಸ್ ತಂಡ ತಪಾಸಣೆ ನಡೆಸಿ 14 ದಿನ ಮನೆಯಿಂದ ಹೊರಬಾರದಂತೆ ಸೂಚನೆ ನೀಡಿದೆ.
ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಬರೇಲಿಯಲ್ಲಿರುವ ಸಂಬಂಧಿಕರನ್ನು ಭೇಟಿಯಾದ ವೃದ್ಧೆ ನಂತರ ಗೋರಕ್ಪುರ, ದೆಹಲಿಗೆ ಹೋಗಿ ಅಲ್ಲಿಂದ ಸ್ವಗ್ರಾಮಕ್ಕೆ ವಾಪಾಸಾಗಿದ್ದರು. ಈ ಕುರಿತು ಮಾಹಿತಿ ತಿಳಿಯುದ್ದಂತೆ ಟಾಸ್ಕ್ಫೋರ್ಸ್ ತಂಡ ಗ್ರಾಮಕ್ಕೆ ಭೇಟಿ ತಪಾಸಣೆ ಮಾಡಿತು. ಮುನ್ನೆಚ್ಚರಿಕೆಯ ಕ್ರಮವಾಗಿ ಹೋಮ್ ಕ್ವಾರಂಟೈನ್ನಲ್ಲಿರುವಂತೆ ತಿಳಿಸಲಾಗಿದೆ. ಅಲ್ಲದೆ ಬೆಂಗಳೂರಿನಿಂದ ಪಟ್ಟಣಕ್ಕೆ ಬಂದವರು ಮನೆಯಿಂದ ಹೊರಗಡೆ ಬರಬಾರದು. ಮನೆಯವರಿಂದ ಅಂತರ ಕಾಪಾಡಿಕೊಳ್ಳಬೇಕು. ಅಲ್ಲದೆ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಸಮೀಪದ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಇಲಾಖೆಗೆ ತಿಳಿಸಬೇಕೆಂದು ಪಿಎಸೈ ನಾಗರಾಜ್, ಡಾ.ಕೊಟ್ರೇಶ್ ಗೌಡ ತಿಳಿಸಿದರು. ಈ ವೇಳೆ ಟಾಸ್ಕ್ಫೋರ್ಸ್ನ ಕಲ್ಲೇಶ್, ವಿಜಯಕುಮಾರ್, ಹೊನ್ನೂರಪ್ಪ, ಚಂದ್ರು ಸುಪ್ರಿಯಾ, ಸವಿತಾ, ರಾಘವರೆಡ್ಡಿ, ಇನಾಯಿತ್, ಮಂಗಳಾ, ಗ್ರಾಪಂ ಸದಸ್ಯರಾದ ವಿಶ್ವನಾಥ, ವಿರುಪಣ್ಣ ಇತರರಿದ್ದರು.