ಲಖನೌ: ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿರುವ ಬೆನ್ನಲ್ಲೇ ಎಲ್ಲ ರಾಜ್ಯ ಸರ್ಕಾರಗಳು ಬಜೆಟ್ ಮಂಡನೆ ಆರಂಭಿಸಿವೆ. ಉತ್ತರ ಪ್ರದೇಶದ ಯೋಗಿ ಆದಿತ್ಯಾನಾಥ ಸರ್ಕಾರವು ಸೋಮವಾರದಂದು ಬಜೆಟ್ ಮಂಡನೆ ಮಾಡಿದೆ. ಮರ್ಯಾದಾ ಪುರುಷ ಶ್ರೀರಾಮ ವಿಮಾನ ನಿಲ್ದಾಣ ಸೇರಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಮೀಸಲಿಡಲಾಗಿದೆ.
ಇದೇ ಮೊದಲನೇ ಬಾರಿಗೆ ಉತ್ತರ ಪ್ರದೇಶದಲ್ಲಿ ಪೇಪರ್ ರಹಿತ ಬಜೆಟ್ ಮಂಡನೆ ಮಾಡಲಾಗಿದೆ. ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು 27,598.40 ಕೋಟಿ ರೂಪಾಯಿಯ ಬಜೆಟ್ ಮಂಡಿಸಿದ್ದಾರೆ. ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ಬಜೆಟ್ ನಿರ್ಮಿಸಿರುವುದಾಗಿ ಹೇಳಲಾಗಿದೆ.
ಅಯೋಧ್ಯೆಯಲ್ಲಿ ಶ್ರೀರಾಮ ವಿಮಾನ ನಿಲ್ದಾಣ ರಚಿಸಲಾಗುವುದು. ಅದಕ್ಕೆಂದು 101 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಉಳಿದಂತೆ ಜುವರ್, ಚಿತ್ರಕೂತ್ ಮತ್ತು ಸೋನ್ಭದ್ರನಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣಕ್ಕಾಗಿ ಒಟ್ಟು 2000 ಕೋಟಿ ರೂ. ಕೊಡಲಾಗಿದೆ. ಮಹಿಳಾ ಕಲ್ಯಾಣಕ್ಕಾಗಿ ಮುಖ್ಯಮಂತ್ರಿಗಳ ಯೋಜನೆಯಲ್ಲಿ ಬಾಲಕಿಯರಿಗೆ ಮಾತ್ರೆ ನೀಡಲು 1200 ಕೋಟಿ ರೂ., ಪೂರ್ವಾಂಚಲ್ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ 1107 ಕೋಟಿ ರೂ., ಬುಂದೇಲ್ಖಂಡ್ ಎಕ್ಸ್ಪ್ರೆಸ್ ವೇಗೆ 1492 ಕೋಟಿ ರೂ., ಗೋರಖ್ಪುರ ಎಕ್ಸ್ಪ್ರೆಸ್ ವೇಗೆ 750 ಕೋಟಿ ರೂ. ಮೀಸಲಿಡಲಾಗಿದೆ.
ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ನೀರು ಪೂರೈಕೆ, ರಸ್ತೆ ಅಭಿವೃದ್ಧಿ ಸೇರಿ ಅನೇಕ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ಕೊಡುವ ಬಜೆಟ್ ಇದಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೆಸರಿಗೆ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಹೇಳಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಯತ್ನಾಳ್, ಕಾಶಪ್ಪನವರ ವಿರುದ್ಧ ಆಕ್ರೋಶ ಹೊರ ಹಾಕಿದ ನಿರಾಣಿ, ಸಿಸಿ ಪಾಟೀಲ್: ಸುದ್ದಿಗೋಷ್ಟಿ ಮಾಹಿತಿ ಇಲ್ಲಿದೆ